ನೆಲ್ಯಾಡಿ (ಉಪ್ಪಿನಂಗಡಿ): ಮದ್ಯ ಖರೀದಿಗೆಂದು ಬಾರ್ಗೆ ಹೋದ ವೃದ್ಧರೊಬ್ಬರಿಗೆ ಅಲ್ಲಿದ್ದ ತಂಡವೊಂದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಯಾಡಿಯ ಜೋಳಿ ಜೋಸೆಫ್ ಹಲ್ಲೆಗೊಳಗಾದವರು.
‘ನಾನು ಬಾರ್ಗೆ ತೆರಳಿದಾಗ ಆರೋಪಿಗಳಾದ ಕುಲದೀಪ್, ಬಿಪಿನ್ ಹಾಗೂ ಅಜೇಯ ಬಾಗಿಲಿಗೆ ಅಡ್ಡವಾಗಿ ನಿಂತಿದ್ದರು. ನಾನು ಬಾರ್ನೊಳಗೆ ಪ್ರವೇಶಿಸುವಾಗ ಕುಲದೀಪ್ ಅವರ ಕೈ ತಾಗಿದೆ. ಇದರಿಂದ ಕೋಪಗೊಂಡ ಆತ ನನ್ನನ್ನು ದೂಡಿ ಅವಾಚ್ಯವಾಗಿ ನಿಂದಿಸಿ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಕುಲದೀಪ್, ಅಜೇಯ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಬೊಬ್ಬೆ ಕೇಳಿ ಬಾರ್ನಲ್ಲಿದ್ದ ಸಿಬ್ಬಂದಿ, ಜನ ಓಡಿ ಬಂದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಜೋಸೆಫ್ ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.
ಜೋಸೆಫ್ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.