ADVERTISEMENT

ಬಳ್ಪ: ಹೊಳೆಯಲ್ಲಿ ಮುಳುಗಿ ಬಾಲಕಿಯರಿಬ್ಬರು ಸಾವು !

ಬೇಸಿಗೆ ರಜೆಯಲ್ಲಿ ಬೆಂಗಳೂರಿನಿಂದ ಊರಿಗೆ ಬಂದಿದ್ದ ವೇಳೆ ನಡೆದ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 8 ಮೇ 2023, 16:22 IST
Last Updated 8 ಮೇ 2023, 16:22 IST
ಬಳ್ಪದಲ್ಲಿ ಕುಮಾರಧಾರ ನದಿಯ ಗುಂಡಿಯಲ್ಲಿ ಬಾಲಕಿಯರು ಮುಳುಗಿದ ಪ್ರದೇಶ 
ಬಳ್ಪದಲ್ಲಿ ಕುಮಾರಧಾರ ನದಿಯ ಗುಂಡಿಯಲ್ಲಿ ಬಾಲಕಿಯರು ಮುಳುಗಿದ ಪ್ರದೇಶ    

ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಬಳ್ಪ ಸಮೀಪದ ಕೇನ್ಯದ ಕಣ್ಕಲ್ ಕುಮಾರಧಾರ ನದಿಯ ಪೆಲತಗುಂಡಿಯ ನೀರಿನಲ್ಲಿ ಮುಳುಗಿ  ಬಾಲಕಿಯರಿಬ್ಬರು ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಬೆಂಗಳೂರಿನ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಆವಂತಿಕಾ (16) ಹಾಗೂ ಅಂಕಿತಾ (13) ಮೃತರು. ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಿಂದ ಹೊರಗೆ ತೆಗೆದಿದ್ದಾರೆ.

ಘಟನೆ ವಿವರ: ಕೇನ್ಯ ಉದಯ ಅಮ್ಮಣ್ಣಾಯ ಅವರ ಸಹೋದರ ಸತೀಶ್ ಅಮ್ಮಣ್ಣಾಯ ಅವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. ಸತೀಶ್‌ ಅವರ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ರಜೆ ಇದ್ದುದರಿಂದ ಬಳ್ಪದ ಚಿಕ್ಕಪ್ಪನ ಮನೆಗೆ ಸೋಮವಾರ ಬೆಳಿಗ್ಗೆ ಬಂದಿದ್ದರು.

ಮನೆ ಸಮೀಪವೇ ಇರುವ ಕುಮಾರಧಾರ ನದಿಗೆ ಸಂಜೆ ವೇಳೆಗೆ ಕುಟುಂಬದವರ ಜೊತೆಗೆ ತೆರಳಿದ್ದರು. ಈ ವೇಳೆ ಹೆಣ್ಣು ಮಕ್ಕಳಿಬ್ಬರು ನೀರಿಗೆ ಇಳಿದಿದ್ದು, ಮುಳುಗಿ ನಾಪತ್ತೆಯಾಗಿದ್ದರು.
ಇದು ಗಮನಕ್ಕೆ ಬರುತ್ತಿದ್ದಂತೆಯೇ ಮನೆಮಂದಿ ನೀರಿನಲ್ಲಿ ಹುಡುಕಿದ್ದರು. ಸ್ಥಳೀಯ ಈಜುಗಾರರೂ ನದಿ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದ್ದರು. ಸುಳ್ಯದಿಂದ ಅಗ್ನಿಶಾಮಕ ದಳವನ್ನು ಕರೆಸಿ ನೀರಿನಲ್ಲಿ ಶೋಧ ನಡೆಸಲಾಯಿತು. ರಾತ್ರಿ ವೇಳೆ ಇಬ್ಬರ ಮೃತದೇಹಗಳು ಪತ್ತೆಯಾದವು.

ADVERTISEMENT

ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ನದಿಯ ಆಳ ತಿಳಿಯದೇ ಬಾಲಕಿಯರು ನದಿಗೆ ಇಳಿದಿರಬಹುದು. ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರಬಹುದು’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

‘ಬಾಲಕಿಯರ ತಂದೆ ತಾಯಿ ಬೆಂಗಳೂರಿನಿಂದ ಬಳ್ಪಕ್ಕೆ ಹೊರಟಿದ್ದಾರೆ. ಇನ್ನಷ್ಟೇ ತಲುಪಬೇಕಿದೆ’ ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.