ADVERTISEMENT

ನಿಖರ ಸುದ್ದಿಗೆ ಮಾಧ್ಯಮದಲ್ಲಿ ಆದ್ಯತೆ ಸಿಗಲಿ: ಸತೀಶ್ ಕುಮಾರ್ ಭಂಡಾರಿ ಆಶಯ

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 6:08 IST
Last Updated 5 ಜೂನ್ 2021, 6:08 IST
ನಿಟ್ಟೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ‘ಕೋವಿಡ್–19 ಪಿಡುಗು ನಿರ್ವಹಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ವರ್ಚುವಲ್ ವಿಚಾರಗೋಷ್ಠಿ ನಡೆಯಿತು.
ನಿಟ್ಟೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ‘ಕೋವಿಡ್–19 ಪಿಡುಗು ನಿರ್ವಹಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ವರ್ಚುವಲ್ ವಿಚಾರಗೋಷ್ಠಿ ನಡೆಯಿತು.   

ಮಂಗಳೂರು: ಕೋವಿಡ್ ಸಂದರ್ಭದಲ್ಲಿ ನಿಖರ, ನಿಷ್ಪಕ್ಷಪಾತ ಮಾಹಿತಿಯ ಕೊರತೆ ಜನರನ್ನು ಕಾಡುತ್ತಿದೆ. ಮಾಧ್ಯಮಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಿಖರ ಸುದ್ದಿಮೂಲಗಳನ್ನು ಆಧರಿಸಿ, ಸುದ್ದಿ ಪ್ರಕಟಿಸಬೇಕು ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾಲಯವು ಶುಕ್ರವಾರ ಆಯೋಜಿಸಿದ್ದ ‘ಕೋವಿಡ್–19 ಪಿಡುಗು ನಿರ್ವಹಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ವರ್ಚುವಲ್ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಮಾತನಾಡಿ, ‘ಕೋವಿಡ್ –19 ಮಾತ್ರ ಅಲ್ಲ, ಎಲ್ಲ ಸಂಕಷ್ಟದ ಸಂದರ್ಭಗಳಲ್ಲೂ ಮಾಧ್ಯಮಗಳು ಗಂಭೀರವಾಗಿ ಕಾರ್ಯನಿರ್ವಹಿಸಿವೆ. ಕೋವಿಡ್‌ ಆರಂಭವಾದಾಗ ಪತ್ರಿಕೆಗಳ ಮೂಲಕ ವೈರಸ್‌ ಸೋಂಕು ಹರಡುತ್ತದೆ ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದ ಓದುಗರು ಪತ್ರಿಕೆಗಳನ್ನು ತರಿಸುವುದನ್ನು ನಿಲ್ಲಿಸಿದರು. ಇದರಿಂದ ಪತ್ರಿಕೆಗಳಿಗೆ ಅತೀವ ನಷ್ಟವಾಯಿತು. ಆದರೂ ಪತ್ರಿಕೆಗಳು ತಲೆಎತ್ತಿ ನಿಂತಿವೆ’ ಎಂದರು.

ADVERTISEMENT

‘ಡೈಜಿ ವರ್ಲ್ಡ್’ ಸಂಸ್ಥೆಯ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಮಾತನಾಡಿ, ‘ನಮ್ಮ ಸಂಸ್ಥೆಯ ಮಾಧ್ಯಮಗಳ ಮೂಲಕ ಕೋವಿಡ್ ಗೆದ್ದವರ ಕಥೆಗಳನ್ನು ಹೇಳಿ, ಜನರಿಗೆ ಸ್ಫೂರ್ತಿ ತುಂಬಲು ಪ್ರಯತ್ನಿಸಿದೆವು. ದಾನಿಗಳಿಂದ ನೆರವು ಪಡೆದು ಕೋವಿಡ್ ಪೀಡಿತರಿಗೆ ನೀಡಿದೆವು. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಅರಿವು ಕಾರ್ಯಕ್ರಮಗಳನ್ನು ನಡೆಸಿದೆವು’ ಎಂದರು.

ಹಿರಿಯ ಪತ್ರಕರ್ತ ಪೃಥ್ವಿರಾಜ ಕವತ್ತೂರು ಮಾತನಾಡಿ, ‘ಸುಳ್ಳು ಸುದ್ದಿಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಿಂದ ಬರುತ್ತಿವೆ ಎಂಬ ವಾದವಿದೆ. ಸಾಮಾಜಿಕ ಮಾಧ್ಯಮಗಳನ್ನು ಮಾಧ್ಯಮಗಳ ಸಾಲಿಗೆ ಸೇರಿಸಬೇಕೇ ಬೇಡವೇ ಎಂಬ ಚರ್ಚೆ ನಡೆಯಬೇಕಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನಸಾಮಾನ್ಯರೇ ಬರವಣಿಗೆಯಲ್ಲಿ ತೊಡಗುತ್ತಾರೆ. ಅದರಲ್ಲಿ ಸಂಪಾದನೆಯ ಪಾತ್ರ ಇಲ್ಲದೆ ಇರುವುದು ಸಮಸ್ಯೆಗೆ ಕಾರಣವಾಗಿದೆ’ ಎಂದರು.

‘ನಮ್ಮ ಕುಡ್ಲ’ ಸಂಸ್ಥೆಯ ಪ್ರಚಲಿತ ವಿದ್ಯಮಾನ ವಿಭಾಗದ ನಿರ್ವಾಹಕ ನಿತಿನ್ ಸಾಲಿಯಾನ್ ಮಾತನಾಡಿ, ‘ಈಗ ಕೋವಿಡ್ ಪಾಸಿಟಿವ್ ಸುದ್ದಿಗಳಿಗಿಂತ ಹೆಚ್ಚಾಗಿ ಪಾಸಿಟಿವ್ ಸುದ್ದಿಗಳು ಬೇಕಾಗಿವೆ. ಸಕಾರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಿಸಬೇಕಾಗಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಐಸಿಎಸ್ಎಸ್‌ಆರ್‌ ಹಿರಿಯ ಫೆಲೊ ಪ್ರೊ.ಎನ್‌.ಉಷಾರಾಣಿ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಸಂವಹನ ಸಂಸ್ಥೆಯ ಮುಖ್ಯಸ್ಥ ಪ್ರೊ.ರವಿರಾಜ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ನೇಸರ ಕಾಡನಕುಪ್ಪೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.