ಉಜಿರೆ: ‘ಉಜಿರೆಯ ಎಸ್.ಡಿ.ಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತಂಡ ರೂಪಿಸಿದ ಡಿಸೈನ್ಗೆ ರಾಷ್ಟ್ರಮಟ್ಟದಲ್ಲಿ ಅಗ್ರ ಹತ್ತರ ಸ್ಥಾನದ ಮನ್ನಣೆ ಸತತ ಎರಡನೇ ಬಾರಿ ದೊರಕಿದೆ. ₹20 ಲಕ್ಷ ಅಭಿವೃದ್ಧಿ ಪ್ರೋತ್ಸಾಹ ಧನ ದೊರಕಿದೆ' ಎಂದು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಶನಿವಾರ ತಿಳಿಸಿದರು.
ಆರೋಗ್ಯಕರ ಉಸಿರಾಟಕ್ಕೆ ಪೂರಕವಾಗುವ ಗಾಳಿ ಶುದ್ಧೀಕರಣ ಯಂತ್ರವನ್ನು ಕಾಲೇಜಿನ ವಿದ್ಯಾರ್ಥಿಗಳ ತಂಡ ಅಭಿವೃದ್ಧಿ ಪಡಿಸಿ ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ಭಾರತ ಸರ್ಕಾರದ ಸಹಯೋಗದೊಂದಿಗೆ ಪ್ರತಿಷ್ಠಿತ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ ಆಯೋಜಿಸಿದ್ದ ಇಂಡಿಯಾ ಇನ್ನೋವೇಶನ್ ಜಾಲೆಂಜ್ ಡಿಸೈನ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಲಾಗಿದೆ.
ವಿದ್ಯಾರ್ಥಿಗಳ ತಂಡ : ಅಶ್ವಿನಿ ಕಾಮತ್ ಮತ್ತು ಅಶ್ವಿನಿ ಎಂ.ಎಸ್ (ಎಲೆಕ್ಟ್ರಾನಿಕ್ಸ್ ವಿಭಾಗ), ನಿಶಾಂತ್ ನಾಯಕ್ (ಎಲೆಕ್ಟ್ರಿಕಲ್ ವಿಭಾಗ), ನರೇಶ್ ಹೊಳ್ಳ (ಮೆಕ್ಯಾನಿಕಲ್ ವಿಭಾಗ). ವಿದ್ಯಾರ್ಥಿಗಳಿಗೆ ಈ ಪ್ರಾಜೆಕ್ಟ್ ಅನ್ನು ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಪಡಿಸಲು ₹ 20 ಲಕ್ಷ ಪ್ರೋತ್ಸಾಹ ಧನ ದೊರಕಿದೆ. ಇದರೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಐ.ಐ.ಎಂ ನಲ್ಲಿ ಒಂದು ವರ್ಷ ವಿಶೇಷ ಅಧ್ಯಯನಕ್ಕೆ ಅವಕಾಶ ದೊರಕಿದೆ.
ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಮಹೇಶ್ ಪ್ರಾಜೆಕ್ಟ್ಗೆ ಮಾರ್ಗದರ್ಶನ ನೀಡಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.