ADVERTISEMENT

ರಾಮರಾಜ್ಯಕ್ಕಾಗಿ ಗ್ರಾಮಗಳ ದತ್ತು: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 14:15 IST
Last Updated 4 ಜುಲೈ 2022, 14:15 IST
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಲ್ಲಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ವಿಶ್ವೇಶತೀರ್ಥರ ಭಾವಚಿತ್ರದ ಮುಂದೆ ದೀಪ ಬೆಳಗಿದರು
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಲ್ಲಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ವಿಶ್ವೇಶತೀರ್ಥರ ಭಾವಚಿತ್ರದ ಮುಂದೆ ದೀಪ ಬೆಳಗಿದರು   

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮುಗಿದ ನಂತರ ರಾಮರಾಜ್ಯ ನಿರ್ಮಾಣದ ಕನಸು ಸಾಕಾರಗೊಳಿಸುವ ಪ್ರಯತ್ನ ನಡೆಯಲಿದೆ. ಇದರ ಭಾಗವಾಗಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಚಿಂತನೆ ಇದೆ ಎಂದು ಮಂದಿರ ನಿರ್ಮಾಣ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ಹೈದರಾಬಾದ್–ಸಿಕಂದರಾಬಾದ್‌ ಅವಳಿ ನಗರದಲ್ಲಿ ಇದೇ 13ರಿಂದ ಕೈಗೊಳ್ಳಲಿರುವ ಚಾತುರ್ಮಾಸ್ಯದ ಅಂಗವಾಗಿ ನಗರದ ಕಲ್ಕೂರ ಪ್ರತಿಷ್ಠಾನದಲ್ಲಿ ಸೋಮವಾರ ಏರ್ಪಡಿಸಿದ್ದ ಪಾದಪೂಜೆ, ತುಲಾಭಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಂದಿರ ನಿರ್ಮಾಣ ಕಾರ್ಯದ ಪ್ರತಿ ಹಂತವೂ ಪೂರ್ವನಿಗದಿಯಂತೆ ಸಾಗುತ್ತಿದ್ದು ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮರಳು ತುಂಬಿರುವುದರಿಂದಾಗಿ ಅಡಿಪಾಯಕ್ಕಾಗಿ 40 ಮೀಟರ್‌ ಆಳದಿಂದ ಕಲ್ಲುಗಳನ್ನು ತುಂಬಲಾಗಿದೆ.2024ರ ಸಂಕ್ರಾಂತಿಯಂದು ಶ್ರೀರಾಮ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದ್ದು ಅದರೊಂದಿಗೆ ಮೊದಲ ಹಂತದ ಕೆಲಸ ಮುಕ್ತಾಯಗೊಳ್ಳಲಿದೆ. ನಂತರ ಸುತ್ತಲೂ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಅವರು ವಿವರಿಸಿದರು.

ADVERTISEMENT

ಎಲ್ಲರಲ್ಲೂ ರಾಮನ ಸದ್ಗುಣಗಳನ್ನು ತುಂಬುವುದು, ಮಾತೃಭೂಮಿಯ ಮೇಲೆ ಪ್ರೀತಿ ಮೂಡಿಸುವುದುರಾಮರಾಜ್ಯದ ಪ್ರಮುಖ ಅಂಶಗಳು. ರಾಮರಾಜ್ಯ ನಿರ್ಮಾಣಕ್ಕೆ ಪಕ್ಷದ ಹಂಗು ಇಲ್ಲ. ಅದು ಪಕ್ಷಾತೀತವಾಗಿ ನಡೆಯುವ ಕಾರ್ಯ. ಉತ್ತಮ ಕಾರ್ಯಗಳನ್ನು ಮಾಡುವವರೆಲ್ಲರೂ ರಾಮರಾಜ್ಯದ ಭಾಗವಾಗಲಿದ್ದಾರೆ’ ಎಂದು ಹೇಳಿದ ಅವರು ‘ನಾಗರಿಕ ಸಮಾಜದಲ್ಲಿ ಕೆಲವೇ ಕೆಲವರು ಅನಾರಿಕರಂತೆ ವರ್ತಿಸಿ ಸಮಾಜದ ಸ್ವಾಸ್ಥ್ಯ ಕೆಡವುತ್ತಾರೆ. ಅಂಥವರನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರಗಳು ಮುಲಾಜಿಲ್ಲದೆ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.