ADVERTISEMENT

ಮಂಗಳೂರು: ಕಡಲತೀರಕ್ಕೆ ಬೇಕಿದೆ ಜೀವ ರಕ್ಷಕರ ‘ಬಲ’

ಸಂಧ್ಯಾ ಹೆಗಡೆ
Published 7 ಏಪ್ರಿಲ್ 2025, 7:31 IST
Last Updated 7 ಏಪ್ರಿಲ್ 2025, 7:31 IST
ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಜೀವರಕ್ಷಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವ ಮೌನೇಶ್, ರಾಹುಲ್, ವಿಧಾತ್ ಹಾಗೂ ದಿನಕರ್ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಜೀವರಕ್ಷಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವ ಮೌನೇಶ್, ರಾಹುಲ್, ವಿಧಾತ್ ಹಾಗೂ ದಿನಕರ್ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಶಾಲಾ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದ್ದು, ಇನ್ನೇನು ಬೇಸಿಗೆ ರಜೆ ಆರಂಭವಾಗಲಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಜಿಲ್ಲೆಯ ಕಡಲತೀರಗಳಲ್ಲಿ ಸಹಜವಾಗಿ ಜನದಟ್ಟಣೆ ಹೆಚ್ಚಲಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರು ನೀರಾಟದ ಮೋಜು–ಮಸ್ತಿಯಲ್ಲಿ ಮೈಮರೆಯದಂತೆ ಎಚ್ಚರಿಸುವ ಜೊತೆಗೆ ಅವರ ಸುರಕ್ಷತೆಗೆ ಆದ್ಯತೆ ನೀಡುವ ಜನಸ್ನೇಹಿ ಪ್ರವಾಸೋದ್ಯಮದ ವಾತಾವರಣ ಕಲ್ಪಿಸಬೇಕಾಗಿದೆ. ಇದಕ್ಕೆ ಅಗತ್ಯವಾಗಿ ಬೇಕಿರುವುದು ಜೀವ ರಕ್ಷಕರ ಬಲ.

ಮಂಗಳೂರು ಸುತ್ತಮುತ್ತ ತಣ್ಣೀರುಬಾವಿ ಬೀಚ್, ಪಣಂಬೂರು, ಸುರತ್ಕಲ್, ಸಸಿಹಿತ್ಲು, ಬೆಂಗ್ರೆ, ಚಿತ್ರಾಪುರ, ಇಡ್ಯಾ, ಉಳ್ಳಾಲ, ಸೋಮೇಶ್ವರ ಹೀಗೆ ಹಲವಾರು ಕಡಲತೀರಗಳು ಇವೆ. ಇವುಗಳಲ್ಲಿ ತಣ್ಣೀರುಬಾವಿ ಫಸ್ಟ್ ಬೀಚ್, ಬ್ಲ್ಯೂ ಫ್ಲಾಗ್‌ ಬೀಚ್, ಪಣಂಬೂರು, ಸೋಮೇಶ್ವರ, ಉಳ್ಳಾಲ, ಸುರತ್ಕಲ್ ಕಡಲತೀರಗಳು ಪ್ರವಾಸಿಗರ ನೆಚ್ಚಿನ ತಾಣಗಳು. ದಿನನಿತ್ಯ ಸಂಜೆ ಬೀಚ್‌ಗಳಲ್ಲಿ ಜನದಟ್ಟಣೆ ಕಂಡು ಬಂದರೂ, ವಾರದ ಕೊನೆಯಲ್ಲಿ, ಹಬ್ಬ ಹರಿದಿನಗಳು, ದೀರ್ಘ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಈ ಸಂದರ್ಭಗಳಲ್ಲಿ ಸಮುದ್ರ ತಟವನ್ನು ಕಾಯುವ ಜೀವ ರಕ್ಷಕ ಸಿಬ್ಬಂದಿಗೆ ಜನರನ್ನು ನಿಯಂತ್ರಿಸುವುದೇ ಹರಸಾಹಸ.

‘ಸಸಿಹಿತ್ಲು ಬೀಚ್‌ನಲ್ಲಿ ಒಬ್ಬರು ಜೀವರಕ್ಷಕ ಸಿಬ್ಬಂದಿ, ಒಬ್ಬರು ಪ್ರವಾಸಿ ಮಿತ್ರ, ತಣ್ಣೀರುಬಾವಿ ಫಸ್ಟ್ ಬೀಚ್‌ನಲ್ಲಿ ಐವರು ಜೀವ ರಕ್ಷಕ ಸಿಬ್ಬಂದಿ, ಬ್ಲ್ಯೂ ಫ್ಲಾಗ್ ಬೀಚ್‌ನಲ್ಲಿ ಇಬ್ಬರು ಜೀವ ರಕ್ಷಕ ಸಿಬ್ಬಂದಿ ಇದ್ದಾರೆ. ಸೋಮೇಶ್ವರ, ಉಳ್ಳಾಲ ಕಡಲತೀರದಲ್ಲಿ ತಲಾ ಒಬ್ಬರು ಪ್ರವಾಸಿ ಮಿತ್ರ ಇರುತ್ತಾರೆ. ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿರುವ ಎಲ್ಲ ಕಡಲತೀರಗಳಲ್ಲಿ ತಲಾ ಒಬ್ಬರು ಪ್ರವಾಸಿ ಮಿತ್ರ ಇರುತ್ತಾರೆ. ಇಲಾಖೆಯಿಂದ ತರಬೇತಿ ನೀಡಿ ಅವರನ್ನು ಅಣಿಗೊಳಿಸಲಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಪಣಂಬೂರು ಕಡಲತೀರವನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಅವರೇ ಜೀವ ರಕ್ಷಕ ಸಿಬ್ಬಂದಿ ನೇಮಿಸಿಕೊಂಡಿದ್ದಾರೆ. ಇಲ್ಲಿ ವಾಟರ್ ಗೇಮ್ಸ್‌ಗಳು ಇವೆ. ಇವುಗಳ ಚಾಲಕರೂ ಸೇರಿ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.

‘ತರಬೇತಿ ನೀಡಿದ ಮೇಲೆ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳುವ ಜೀವ ರಕ್ಷಕ ಸಿಬ್ಬಂದಿಗೆ ದಿನಕ್ಕೆ ₹600 ಸಂಬಳ ದೊರೆಯುತ್ತದೆ. ಹಲವಾರು ಜನರಿಗೆ ಇಲಾಖೆಯಿಂದ ತರಬೇತಿ ನೀಡಲಾಗಿದೆ. ಆದರೆ, ಇಲ್ಲಿ ತರಬೇತಿ ಪಡೆದವರು ಕೆಲವು ದಿನ ಕೆಲಸ ಮಾಡಿ ಬೇರೆ ಕಡೆಗಳಿಗೆ ಹೆಚ್ಚಿನ ಸಂಬಳಕ್ಕೆ ಉದ್ಯೋಗಕ್ಕೆ ಹೋಗುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಇಲಾಖೆಯ ಸಿಬ್ಬಂದಿಯೊಬ್ಬರು.

‘ವಾರದ ದಿನಗಳಲ್ಲಿ ಅಷ್ಟೊಂದು ಜನದಟ್ಟಣೆ ಇರುವುದಿಲ್ಲ. ವಾರದ ಕೊನೆ ಹಾಗೂ ಹಬ್ಬದ ಸಂದರ್ಭಗಳಲ್ಲಿ, ಸರ್ಕಾರಿ ರಜಾ ದಿನಗಳಲ್ಲಿ ವಿಪರೀತ ಜನದಟ್ಟಣೆ ಇರುತ್ತದೆ. ಈ ವೇಳೆ ಇರುವ ಸಿಬ್ಬಂದಿಯಿಂದ ನಿರ್ವಹಣೆ ಕಷ್ಟ. ನೀರಿಗೆ ನುಗ್ಗುವ ಪ್ರವಾಸಿಗರನ್ನು ತಡೆದರೆ, ಅವರು ಸ್ವಲ್ಪ ಮುಂದೆ ಹೋಗಿ ಇನ್ನೊಂದು ಕಡೆಯಲ್ಲಿ ನೀರಿಗೆ ಇಳಿಯಲು ಪ್ರಯತ್ನಿಸುತ್ತಾರೆ. ಸಾಧ್ಯವಾದಷ್ಟು ನಿಯಂತ್ರಿಸಲು ಶ್ರಮಪಡುತ್ತೇವೆ’ ಎಂದು ಜೀವ ರಕ್ಷಕ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

‘ಜೀವ ರಕ್ಷಕ ಸಿಬ್ಬಂದಿಗೆ ಪ್ರಮುಖ ಬೀಚ್‌ಗಳಲ್ಲಿ ಲೈಫ್ ಬೊಯ್ (ರಿಂಗ್) ಒದಗಿಸಲಾಗಿದೆ. ಇನ್ನು ಕೆಲವು ಬೀಚ್‌ಗಳಲ್ಲಿ ಅದೂ ಇಲ್ಲ. ಜೀವ ರಕ್ಷಕ ಸಿಬ್ಬಂದಿಗೆ ವಿಮೆ ಸೌಲಭ್ಯ ಇಲ್ಲ. ಬಿಡುವಿನ ವೇಳೆಯಲ್ಲಿ ಕುಳಿತುಕೊಳ್ಳಲು ನೆರಳಿನ ಆಶ್ರಯವೂ ಇಲ್ಲ. ಸುಡು ಬಿಸಿಲಿನಲ್ಲೇ ನಿಲ್ಲಬೇಕಾದ ಪರಿಸ್ಥಿತಿ. ಪಣಂಬೂರಿನಲ್ಲಿ ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದು, ಜೀವ ರಕ್ಷಕ ಸಿಬ್ಬಂದಿ, ವಾಟರ್ ಗೇಮ್ಸ್ ಚಾಲಕರೂ ಸೇರಿ 20ಕ್ಕೂ ಹೆಚ್ಚು ಕೆಲಸಗಾರರು ಇದ್ದಾರೆ. ಜೀವ ರಕ್ಷಕರಿಗೇ ಜೀವ ಭದ್ರತೆ ಇಲ್ಲ’ ಎಂದು ಇನ್ನೊಬ್ಬರು ಜೀವ ರಕ್ಷಕ ಸಿಬ್ಬಂದಿ ಬೇಸರಿಸಿದರು.

‘ಈಜು ಬರುವವರನ್ನು ಜೀವ ರಕ್ಷಕ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು. ಸಮುದ್ರ ದಡದಲ್ಲಿ ನಿಂತು ಎಚ್ಚರಿಕೆ ನೀಡುವುದು ಮಾತ್ರ ಅವರ ಹೊಣೆಯಲ್ಲ, ಅಪಾಯದಲ್ಲಿ ಸಿಲುಕಿದವರ ರಕ್ಷಣೆಯೂ ಅವರ ಜವಾಬ್ದಾರಿ. ಸಸಿಹಿತ್ಲು ಬೀಚ್‌ಗೆ ಭೇಟಿ ನೀಡಿದ ಅನೇಕ ಅನುಭವ ಇದು. ತಣ್ಣೀರುಬಾವಿ ಫಸ್ಟ್‌ ಬೀಚ್‌ಗೆ ಭೇಟಿ ನೀಡುವವರ ಪ್ರಮಾಣ ಗಮನಿಸಿದರೆ, ವಾರಾಂತ್ಯದ ವೇಳೆ ಕನಿಷ್ಠ 15 ಮಂದಿ ಜೀವ ರಕ್ಷಕರು ಅಲ್ಲಿಗೆ ಅಗತ್ಯವಿದೆ’ ಎಂದು ಮೀನುಗಾರ ಮುಖಂಡರೊಬ್ಬರು ಹೇಳಿದರು.

ಸುರತ್ಕಲ್ ಲೈಟ್ ಹೌಸ್, ಚಿತ್ರಾಪುರ, ಇಡ್ಯಾ, ಬೆಂಗರೆ ಬೀಚ್‌ಗಳಲ್ಲಿ ಜೀವ ರಕ್ಷಕರು ಅಥವಾ ಗೃಹ ರಕ್ಷಕ ಸಿಬ್ಬಂದಿ ಇಲ್ಲ. ಯಾರಾದರೂ ಅಪಾಯಕ್ಕೆ ಸಿಲುಕಿದರೆ, ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸುತ್ತಾರೆ.  ಎಂದು ಅವರು ಹೇಳಿದರು.

ಪೂರಕ ಮಾಹಿತಿ: ಮೋಹನ್ ಕುತ್ತಾರ್

ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ದೇಶನ ನೀಡುತ್ತಿರುವ ಜೀವರಕ್ಷಕ ಸಿಬ್ಬಂದಿ : ಪ್ರಜಾವಾಣಿ ಚಿತ್ರ
ಪ್ರವಾಸಿಗರು ಜೀವ ರಕ್ಷಕ ಸಿಬ್ಬಂದಿ ನೀಡುವ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಮ್ಮನ್ನು ನಿರ್ಲಕ್ಷಿಸಿ ನೀರಿಗಿಳಿದು ಅಪಾಯಕ್ಕೆ ಸಿಲುಕುತ್ತಾರೆ. ಇದು ಬೇಸರದ ಸಂಗತಿ.
ದಿನಕರ್ ಜೀವ ರಕ್ಷಕ ಸಿಬ್ಬಂದಿ
ಮೋಜು ಮಸ್ತಿಯ ಮೂಡ್‌ನಲ್ಲಿ ಬರುತ್ತಾರೆ. ಕೆಲವರು ವಿಪರೀತ ಕುಡಿದು ಬಂದು ನೀರಿಗಿಳಿಯುತ್ತಾರೆ. ನಾವು ತಿಳಿ ಹೇಳಿದರೆ ನಮ್ಮ ಮೇಲೆ ತಿರುಗಿ ಬೀಳುತ್ತಾರೆ. ನಾವು ಹೇಳುವ ಸುರಕ್ಷತೆ ಸೂಚನೆ ಪಾಲಿಸಬೇಕು.
ರಾಹುಲ್ ಜೀವ ರಕ್ಷಕ ಸಿಬ್ಬಂದಿ
‘ಹೆಚ್ಚುವರಿ ನೇಮಕಕ್ಕೆ ಯೋಚನೆ’
ತಣ್ಣೀರುಬಾವಿ ಫಸ್ಟ್‌ ಬೀಚ್ ಬ್ಲ್ಯೂ ಫ್ಲಾಗ್ ಸಸಿಹಿತ್ಲುವಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಜೀವ ರಕ್ಷಕ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತದೆ. ತರಬೇತಿ ಪಡೆದ ಪ್ರಮಾಣೀಕೃತ ಜೀವ ರಕ್ಷಕ ಸಿಬ್ಬಂದಿಯನ್ನೇ ನೇಮಿಸಲಾಗಿದೆ. ಮಳೆಗಾಲದ ವೇಳೆ ವಿಪತ್ತು ನಿರ್ವಹಣೆಗೆ ತರಬೇತಿ ಪಡೆದ ಗೃಹ ರಕ್ಷಕ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅದೇ ಮಾದರಿಯಲ್ಲಿ ಜನದಟ್ಟಣೆ ಇರುವ ಸಂದರ್ಭಗಳಲ್ಲಿ ಬೇಸಿಗೆ ರಜೆಯ ಅವಧಿಯಲ್ಲಿ ನೇಮಕಕ್ಕೆ ಯೋಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿದರು. ತಣ್ಣೀರುಬಾವಿ ಫಸ್ಟ್ ಬೀಚ್ ಬ್ಲ್ಯೂ ಫ್ಲಾಗ್ ಬೀಚ್‌ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಟೆಂಡರ್ ಪಡೆದವರಿಂದ ಬೀಚ್ ನಿರ್ವಹಣೆಯಾಗುತ್ತದೆ. ಇತ್ತೀಚೆಗೆ ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಪ್ರವಾಸಿಗರು ಕಡಲತೀರಕ್ಕೆ ತೆರಳುವ ಮುನ್ನ ಸುರಕ್ಷಿತ ತಾಣಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜೆಟ್‌ ಸ್ಕೀ ಒದಗಿಸಲಿ’
‘ಸಮುದ್ರದ ಅಲೆಗಳು ಗಾಳಿಯ ಮೇಲೆ ನಿರ್ಧರಿತವಾಗುವುದರಿಂದ ಅವುಗಳ ಅಂತರಾಳವನ್ನು ಊಹಿಸಿ ಹೇಳಲು ಸಾಧ್ಯವಾಗದು. ಸಮುದ್ರದಲ್ಲಿ ಪ್ರತಿ 20 ಮೀಟರ್ ಅಂತರದಲ್ಲಿ ಅಲೆಗಳ ಸಂಚಲನ ವ್ಯತ್ಯಾಸ ಇರುತ್ತದೆ. ಕಡಲ ಮರ್ಮ ತಿಳಿದಿರುವ ಜೀವ ರಕ್ಷಕ ಸಿಬ್ಬಂದಿಯ ನಿರ್ದೇಶನಗಳನ್ನು ಪ್ರವಾಸಿಗರು ಪಾಲಿಸಬೇಕು. ಯಾರೂ ಇಲ್ಲದಾಗ ನೀರಿಗಿಳಿದು ಮುನ್ನುಗ್ಗುವುದು ಅಪಾಯಕಾರಿ’ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ ತಿಳಿಸಿದರು.  ಸಾಂಪ್ರದಾಯಿಕ ಈಜುಗಾರಿಕೆ ಬಲ್ಲವರನ್ನೇ ಜೀವ ರಕ್ಷಕ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು. ಸಣ್ಣ ಅಹಿತಕರ ಘಟನೆಯೂ ಪ್ರವಾಸೋದ್ಯಮದ ಮೇಲೆ ದು‌ಷ್ಪರಿಣಾಮ ಬೀರಬಲ್ಲದು ಎಂಬ ಅರಿವು ಸದಾ ಜಾಗೃತವಾಗಿರಬೇಕು. ಜೀವ ರಕ್ಷಕ ಸಿಬ್ಬಂದಿ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಹೊಂದಿದ್ದರೆ ಹೆಚ್ಚು ಅನುಕೂಲ. ಪ್ರವಾಸಿಗರು ಭೇಟಿ ನೀಡುವ ಎಲ್ಲ ಬೀಚ್‌ಗಳಲ್ಲಿ ಜೆಟ್ ಸ್ಕೀ ಒದಗಿಸಬೇಕು. ಇದು ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ ಸಹಕಾರಿ’ ಎಂದು ಅವರು ಈ ಹಿಂದೆ ಜೆಟ್ ಸ್ಕೀ ಮೂಲಕ ಹಲವರನ್ನು ರಕ್ಷಣೆ ಮಾಡಿದ ಘಟನೆ ವಿವರಿಸಿದರು.
‘ಮೀನುಗಾರರ ಮಾತು ಮೀರದಿರಿ’
ಉಳ್ಳಾಲ ಕಡಲ ತೀರದಲ್ಲಿ ಜೀವ ರಕ್ಷಕ ಈಜುಗಾರರ ಸಂಘ ಮೊಗವೀರ ಪಟ್ಣದ ಸದಸ್ಯರು ಜೀವ ರಕ್ಷಕ ಸಿಬ್ಬಂದಿಗೆ ನೆರವಾಗುತ್ತಾರೆ. ಉಳ್ಳಾಲ ಕಡಲ ತೀರದ ಕೆಲವು ಪ್ರದೇಶಗಳಲ್ಲಿ ಆಳಗುಂಡಿ ಇದೆ. ಪ್ರವಾಸಿಗರು ಎಚ್ಚರವಹಿಸಬೇಕು. ಆಳದ ಅರಿವಿಲ್ಲದೆ ನೀರಿನಲ್ಲಿ ನಡೆದು ಅಪಾಯಕ್ಕೆ ಸಿಲುಕಿದ ಅನೇಕರನ್ನು ಮೀನುಗಾರರು ರಕ್ಷಣೆ ಮಾಡಿದ ಘಟನೆಗಳು ನಡೆದಿವೆ. ನಾನು ಸ್ವತಃ ಅನೇಕರನ್ನು ರಕ್ಷಣೆ ಮಾಡಿದ್ದೇನೆ. ಪ್ರವಾಸಿಗರು ಸ್ಥಳೀಯರು ನೀಡುವ ನಿರ್ದೇಶನಗಳನ್ನು ಮೀರಬಾರದು ಎಂದು ಉಳ್ಳಾಲ ಗೃಹ ರಕ್ಷಕ ದಳದ ಗೃಹ ರಕ್ಷಕ ಪ್ರಸಾದ್ ಸುವರ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.