ADVERTISEMENT

ಬೆಳ್ತಂಗಡಿ: ಸ್ಥಳೀಯಾಡಳಿತದ ತಾರತಮ್ಯ ಧೋರಣೆ ಖಂಡನೀಯ

ಬೆಳ್ತಂಗಡಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಆಲಿಸುವ ಸಭೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:46 IST
Last Updated 29 ಜುಲೈ 2025, 6:46 IST
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಮಿನಿ ವಿಧಾಸೌಧದ ಸಭಾಂಗಣದಲ್ಲಿ ನಡೆಯಿತು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಮಿನಿ ವಿಧಾಸೌಧದ ಸಭಾಂಗಣದಲ್ಲಿ ನಡೆಯಿತು   

ಬೆಳ್ತಂಗಡಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಆಲಿಸುವ ಸಭೆಯು ತಹಶೀಲ್ದಾರ್‌ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಮಿನಿ ವಿಧಾಸೌಧದ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ರೆಂಕೆದಗುತ್ತು, ನಾರಾವಿ ಸೇರಿದಂತೆ ವಿವಿಧ ಕಡೆಗಳಲ್ಲಿ ದಲಿತರು ಮನೆ ಕಟ್ಟಲು ಸರ್ಕಾರಿ ಭೂಮಿ ಒತ್ತುವರಿ ಮಾಡಿದರೆ ಕಂದಾಯ ಇಲಾಖೆ ತ್ವರಿತಗತಿಯಲ್ಲಿ ತೆರವುಗೊಳಿಸುತ್ತದೆ. ಆದರೆ, ಶ್ರೀಮಂತರು ಒತ್ತುವರಿ ಮಾಡಿದ್ದಾರೆ. ಅವರಿಗೆ ಪಟ್ಟಣ ಪಂಚಾಯಿತಿ ಸಹಿತ ಸ್ಥಳೀಯ ಆಡಳಿತಗಳು ವಿದ್ಯುತ್‌, ನೀರು ಸಂಪರ್ಕಕ್ಕೆ ಪರವಾನಗಿ ಕೊಡುತ್ತಾರೆ. ಈ ರೀತಿಯ ಧೋರಣೆಯನ್ನು ಖಂಡಿಸುವುದಾಗಿ ಮುಖಂಡರಾದ ಸಂಜೀವ ಆರ್., ಬಿ.ಕೆ.ವಸಂತ್‌, ರಮೇಶ್‌ ಆರ್‌., ಶೇಖರ್‌ ಲಾಯಿಲ, ಶೇಖರ್‌ ಕುಕ್ಕೇಡಿ, ನೇಮಿರಾಜ್‌ ಕಿಲ್ಲೂರು ಹೇಳಿದರು.

ಈ ರೀತಿಯ ತಾರತಮ್ಯ ಮಾಡುವುದಿಲ್ಲ. ಹೊಸದಾಗಿ ಒತ್ತುವರಿ ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದೆ ಒತ್ತುವರಿ ಮಾಡಿದ್ದರೆ ಅಂಥವರಿಗೆ ನೋಟೀಸ್‌ ನೀಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಇಲಾಖೆ ಮುಂದಾಗುತ್ತಿದೆ ಎಂದು ತಹಶೀಲ್ದಾರ್ ಹೇಳಿದರು.

ADVERTISEMENT

ಸುಲ್ಕೇರಿಮೊಗ್ರು ಮಾಳಿಗೆ ಪರಿಶಿಷ್ಟ ಪಂಗಡದವರ ಕಾಲೊನಿಗೆ ವಿದ್ಯುತ್‌ ಸಂಪರ್ಕ ಇಲ್ಲದೆ ತೊಂದರೆ ಆಗುತ್ತಿದೆ. ಈ  ಸಂಬಂಧ ಸಚಿವರನ್ನು ಭೇಟಿಯಾಗಿ ಅನುಮೋದನೆ ಪಡೆದಿದ್ದೇವೆ. ಕಾಮಗಾರಿ ನಡೆಯುತ್ತಿದ್ದು, ದೀಪಾವಳಿ ಒಳಗೆ ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಮುಖಂಡ ಶೇಖರ ಕುಕ್ಕೇಡಿ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಎಇಇ ಬೆಂಜಮಿನ್‌ ಬ್ರಾಗ್ಸ್‌, ಕಂಬ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಕೇಬಲ್‌ಗಾಗಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಮುಂಬೈ ಮೂಲದ ಕಂಪನಿ ಸರಬರಾಜು ಮಾಡಲು ಒಪ್ಪಿದ್ದು, ಅಕ್ಟೋಬರ್‌ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ತಾಲ್ಲೂಕಿನ ಪ್ರತಿ ಮಂಡಲ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್‌ ಭವನಕ್ಕೆ 50 ಸೆಂಟ್ಸ್‌ ಜಾಗ ಮೀಸಲಿಡಲು ಸಭೆಯಲ್ಲಿ ಒತ್ತಾಯಿಸಿದರು.

ಬೆಳ್ತಂಗಡಿ ಕ್ರೀಡಾಂಗಣದಲ್ಲಿ ಅಂಬೇಡ್ಕರ್‌ ಭವನದ ನಿವೇಶನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಹಲವಾರು ಬಾರಿ ಪ್ರಯತ್ನಿಸಿದ್ದು, ಪ್ರಕ್ರಿಯೆ ಏನಾಗಿದೆ ಎಂದು ಶೇಖರ್‌ ಕುಕ್ಕೇಡಿ ಕೇಳಿದರು. ತಹಶೀಲ್ದಾರ್‌ ಉತ್ತರಿಸಿ, ಈಗಾಗಲೇ 4 ಎಕರೆ ಜಮೀನು ಸರ್ಕಾರದ ಆರ್‌ಟಿಸಿ ಆಗಿದ್ದು, ಕೆಲವೇ ದಿನಗಳಲ್ಲಿ ಅಂಬೇಡ್ಕರ್‌ ಭವನಕ್ಕೆ ಮೀಸಲಿಡಲಾಗುವುದು ಎಂದರು.

ತಾಲ್ಲೂಕಿನ ಸಹಕಾರ ಕ್ಷೇತ್ರದ ಉದ್ಯೋಗದಲ್ಲಿ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಕಸ ಗುಡಿಸುವ, ಕಚೇರಿ ತೆರೆಯುವ ಕೆಲಸವನ್ನು ದಲಿತರಿಂದ ಮಾಡಿಸಲಾಗುತ್ತಿದೆ. ಬಹುಸಂಖ್ಯೆಯಲ್ಲಿರುವ ದಲಿತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ತಾರತಮ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದರು.

ಸಹಕಾರ ಸಂಘಗಳ ಅಧಿಕಾರಿ ಪ್ರತಿಮಾ ಉತ್ತರಿಸಿ, ಬಹುತೇಕ ಎಲ್ಲ ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಿಬ್ಬಂದಿ ಇದ್ದಾರೆ ಎಂದರು. ಯಾವ ಸಹಕಾರ ಸಂಘಗಳಲ್ಲಿ ಸಿಇಒ ಹುದ್ದೆಯಲ್ಲಿ ದಲಿತರು ಇದ್ದಾರೆ ಎಂದು ಮುಖಂಡರು ಪ್ರಶ್ನಿಸಿದರು. ಈ ಹುದ್ದೆ ಅನುಭವದ ಅಧಾರದಲ್ಲಿ ಸಿಗುತ್ತದೆ ಎಂದಾಗ ನೇಮಕವೇ ಆಗದಿದ್ದರೆ ಪದೊನ್ನತಿ ಎಲ್ಲಿ ಸಿಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಯ್ಯೂರು ಭೀಮಂಡೆ ಬಳಿ ಮೂರು ದಿನವಾದರೂ ವಿದ್ಯುತ್‌ ಬಂದಿಲ್ಲ. ಪವರ್‌‌ಮ್ಯಾನ್‌ಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಬಿ.ಕೆ.ವಸಂತ್‌ ಆರೋಪಿಸಿದರು.

ಸವಣಾಲು ಹಿತ್ತಿಲ ಪೇಲ ಬಳಿ ಸೇತುವೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ತಕ್ಷಣ ಸೇತುವೆ ನಿರ್ಮಿಸಬೇಕೆಂದು ಶೇಖರ ಎಲ್‌. ಒತ್ತಾಯಿಸಿದರು. ಈ ಬಗ್ಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ಮುಗುಳಿ ಬಳಿ ಎರಡು ಹಾಸ್ಟೆಲ್‌ಗಳಿದ್ದು ಸುಮಾರು 200 ವಿದ್ಯಾರ್ಥಿಗಳಿದ್ದಾರೆ. ಅವರು 5 ಕಿ.ಮೀ ನಡೆದುಕೊಂಡು ಹೋಗಬೇಕು. ಇಲ್ಲದೆ ಇದ್ದರ ಆಟೊ ಅವಲಂಬಿಸಬೇಕು. ಸಮಸ್ಯೆ ನಿವಾರಿಸಲು ಸರ್ಕಾರಿ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಸಂಜೀವ ಆರ್‌., ಬಿ.ಕೆ.ವಸಂತ್‌ ಒತ್ತಾಯಿಸಿದರು.

ಬೆಳ್ತಂಗಡಿ ಹಳೆಕೋಟೆ ಬಳಿ ಇರುವ ಹಾಸ್ಟೆಲ್‌ನಿಂದ ರಾತ್ರಿ 9ಗಂಟೆಯ ನಂತರ ವಿದ್ಯಾರ್ಥಿಗಳು ಪೇಟೆ ಕಡೆ ಸುತ್ತಾಡುತ್ತಿರುತ್ತಾರೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿ.ಕೆ.ವಸಂತ್‌ ಒತ್ತಾಯಿಸಿದರು.

ಬೆಳ್ತಂಗಡಿ ಸಮುದಾಯ ಆಸ್ಪತ್ರೆ ಡಿ ದರ್ಜೆ ನೌಕರಿಗೆ ಪ್ರತಿ ತಿಂಗಳು ವೇತನವಾಗುವಂತೆ ನೋಡಿಕೊಳ್ಳಬೇಕು. ಕರಂಬಾರು ಅಂಬೇಡ್ಕರ್‌ ಭವನಕ್ಕೆ ಮೀಸಲಿಟ್ಟ ಜಾಗವನ್ನು ರಸ್ತೆಗೆ ಬಳಸಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕು. ಕಣಿಯೂರಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್‌ ಭವನದಲ್ಲಿ ಉದ್ಘಾಟನೆಗೆ ಮೊದಲೇ ನೀರು ಸೋರುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್‌, ಸಮಾಜ ಕಲ್ಯಾಣಾಧಿಕಾರಿ ಧನಂಜಯ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.