ಮಂಗಳೂರು: ಇತ್ತೀಚೆಗೆ ನಗರದ ಮೂರು ದೈವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ಬರಹಗಳನ್ನು ಹಾಕುವ ಮೂಲಕ ಧಾರ್ಮಿಕ ನಂಬಿಕೆಗೆ ಚ್ಯುತಿಯನ್ನು ಉಂಟು ಮಾಡಿದ್ದಾರೆ. ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದ್ದು, ಖಂಡನೀಯ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದ್ದಾರೆ.
ಯಾವುದೇ ಧರ್ಮದ ಭಕ್ತಾದಿಗಳ ನಂಬಿಕೆಗೆ ಚ್ಯುತಿ ಬರುವಂತೆ ಮಾಡುವುದು ಯಾವುದೇ ಕಾರಣಕ್ಕೂ ಸಲ್ಲದು. ಇದು ಅವಿವೇಕಿಗಳ ಮತ್ತು ಹೇಡಿಗಳ ಕೃತ್ಯವಾಗಿದ್ದು, ಆ ವ್ಯಕ್ತಿಗಳ ವಿಕೃತ ಮನಸ್ಸು ಕಂಡು ಬರುತ್ತದೆ. ಮತ್ತೊಬ್ಬರ ಧಾರ್ಮಿಕ ನಂಬಿಕೆಗೆ ಮಸಿ ಬಳೆಯುವ ಹಾಗೂ ಶಾಂತಿ, ಕೋಮು ಸಾಮರಸ್ಯ ಕದಡುವ ಸಮಾಜ ದ್ರೋಹಿ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.
ಅಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕ್ಷೇತ್ರದ ಭಕ್ತಾದಿಗಳಿಗೆ ನ್ಯಾಯ ಒದಗಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
‘ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಹಾಗೂ ಇನ್ನೊಬ್ಬರ ಧರ್ಮವನ್ನು ಹೀಯಾಳಿಸುವ ಕೃತ್ಯಗಳು ಮುಂದುವರಿಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ನೊಂದ ಕ್ಷೇತ್ರದ ಭಕ್ತರಿಗೆ ನಮ್ಮ ಸಹಾನುಭೂತಿಯಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.