ಕೊಲ್ಯದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು.
ಉಳ್ಳಾಲ: ‘ಬಜರಂಗದಳ, ವಿಶ್ವಹಿಂದೂ ಪರಿಷತ್, ಸಂಸದರು, ಶಾಸಕರು, ಮೇಯರ್, ಮುಡಾ ಅಧ್ಯಕ್ಷರು ಸೇರಿದಂತೆ ಹಿಂದೂ ಸಮಾಜದ ಆಶಯದಂತೆ ಅಂದಿನ ರಾಜ್ಯ ಸರ್ಕಾರ ನಾರಾಯಣಗುರುಗಳ ವೃತ್ತ ನಿರ್ಮಿಸಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ಕೊಲ್ಯದ ನಾರಾಯಣ ಗುರು ಮಂದಿರದಲ್ಲಿ ನಡೆದ ಹಿಂದುಳಿದ ವರ್ಗಗಳ ಸಾಮಾಜಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವಿಚಾರದಲ್ಲಿ ರಾಜಕೀಯ ಮಾಡುವವರು ಸಿದ್ಧರಾಮಯ್ಯ ಅವರನ್ನು ಕರೆಸಿ ಗುರುಗಳಿಗೆ ಮಾಲಾರ್ಪಣೆ ಮಾಡಿಸಲಿ. ಲೇಡಿಹಿಲ್ನಲ್ಲಿ ನಾರಾಯಣ ಗುರು ವೃತ್ತವಾಗಿಸಲು ಸಾರ್ವಜನಿಕವಾಗಿ ಅರ್ಜಿಗಳನ್ನ ಸಲ್ಲಿಸಲಾಗಿತ್ತು. ಹಿಂದೂ ಸಮಾಜದ ಹೋರಾಟ, ಬಿಜೆಪಿಯ ಪ್ರಯತ್ನದಿಂದ ವೃತ್ತ ನಿರ್ಮಾಣವಾಗಿದೆ. ಆದರೆ, ಇಂದು ಕೆಲವರು ನಾರಾಯಣ ಗುರುಗಳ ವೃತ್ತ ನಾವೇ ಮಾಡಿದ್ದು ಎಂದು ಹೇಳಿಕೊಳ್ಳುವುದು ಸರಿಯಲ್ಲ. ಬಿಜೆಪಿ ಮತ್ತು ಪಕ್ಷದ ನೇತೃತ್ವ ವಹಿಸಿದ ನಾಯಕರಿಗೆ ಇದನ್ನೆಲ್ಲ ಎದುರಿಸುವ ಶಕ್ತಿ ಇದೆ. ಜನತೆ ಜಾತಿ ನೋಡದೆ ಒಗ್ಗಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು’ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಥ ನಾಯಕನನ್ನು ಲೋಕಸಭೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಜೋಗಿ, ಮಂಗಳೂರು ಮಂಡಲ ಅಧ್ಯಕ್ಷ ಗಣೇಶ್ ಸುವರ್ಣ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಹಿಂದುಳಿದ ವರ್ಗದ ರಾಜ್ಯ ಘಟಕದ ಕಾರ್ಯದರ್ಶಿ ಆರ್.ಸಿ.ನಾರಾಯಣ, ಪ್ರದಾನ ಕಾರ್ಯದರ್ಶಿ ಶಶಿಧರ, ಬಿಜೆಪಿ ಜಿಲ್ಲಾ ಘಟಕದದ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಮಂಡಲ ಉಸ್ತುವಾರಿ ದಿನೇಶ್ ಅಮ್ಟೂರು, ರಾಜ್ಯ ಮೀನುಗಾರರ ಪ್ರಕೋಷ್ಟದ ಸಹ ಸಂಚಾಲಕ ಯಶವಂತ್ ಅಮೀನ್, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಕಾರ್ಯದರ್ಶಿ ರವಿ ಸೋವೂರು, ಬಿಜೆಪಿ ಮಂಡಲ ಉಪಾಧ್ಯಕ್ಷ ರವಿ ಶಂಕರ್ ಸೋಮೇಶ್ವರ, ಪ್ರಮುಖರಾದ ಗಣೇಶ್ ಕಾಪಿಕಾಡು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.