ADVERTISEMENT

ಮಂಗಳೂರು: ಮಾಸಾಶನವಿಲ್ಲದೇ ಕಂಗಾಲಾದ ಅಂಧ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 5:06 IST
Last Updated 1 ಜುಲೈ 2020, 5:06 IST
ಮಾಜಿ ಸಚಿವ ಬಿ.ರಮಾನಾಥ ರೈ ಅವರೊಂದಿಗೆ ಸೋಮಯ್ಯ
ಮಾಜಿ ಸಚಿವ ಬಿ.ರಮಾನಾಥ ರೈ ಅವರೊಂದಿಗೆ ಸೋಮಯ್ಯ   

ಮಂಗಳೂರು: ನಗರದ ಹೊರ ವಲಯದಲ್ಲಿರುವ ಮಳಲಿ ಗ್ರಾಮದ ಪರಿಶಿಷ್ಟ ಜಾತಿಯ ಸೋಮಯ್ಯ ಎಂಬ ಅಂಧ ವ್ಯಕ್ತಿಗೆ ಎಂಟು ತಿಂಗಳಿನಿಂದ ಅಂಗವಿಕಲರ ಮಾಸಾಶನ ಪಾವತಿಯೇ ಆಗಿಲ್ಲ. ಈ ಸಂಬಂಧ ಸರ್ಕಾರಿ ಕಚೇರಿಗಳಿಗೆ ಅಲೆದು, ಅಲೆದು ಸುಸ್ತಾಗಿದ್ದಾರೆ ಅವರು.

ಮಾಸಾಶನ ಸಿಗದೇ ಕಂಗಾಲಾಗಿರುವ ಅವರು ಮಂಗಳವಾರ ತಮ್ಮ ಅಳಲು ತೋಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಬಂದಿದ್ದರು. ಪತ್ರಿಕಾಗೋಷ್ಠಿಯ ನಡುವೆಯೇ ಸೋಮಯ್ಯ ಅವರನ್ನು ಪರಿಚಯಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಸಮಸ್ಯೆ ಕುರಿತು ವಿವರಿಸಿದರು.

‘ನನಗೆ ಎರಡೂ ಕಣ್ಣು ಕಾಣಿಸುವುದಿಲ್ಲ. ಒಬ್ಬನೇ ಇದ್ದೇನೆ. ಸರ್ಕಾರ ನೀಡುವ ಮಾಸಾಶನವೇ ಜೀವನಕ್ಕೆ ಆಧಾರ. ಎಂಟು ತಿಂಗಳಿಂದ ಹಣವೇ ಬಂದಿಲ್ಲ. ತಾಲ್ಲೂಕು ಕಚೇರಿ ಸೇರಿದಂತೆ ಹಲವು ಕಡೆ ಹೋಗಿ ವಿಚಾರಿಸಿದೆ. ಯಾರೂ ಸರಿಯಾದ ಉತ್ತರ ನೀಡಲಿಲ್ಲ’ ಎಂದು ಸೋಮಯ್ಯ ಹೇಳಿದರು.

ADVERTISEMENT

‘ಲಾಕ್‌ಡೌನ್‌ ಅವಧಿಯಲ್ಲಿ ಬಸ್‌ ಸೌಲಭ್ಯ ಇರಲಿಲ್ಲ. ಬಾಡಿಗೆ ಆಟೊದಲ್ಲಿ ಸರ್ಕಾರಿ ಕಚೇರಿಗಳಿಗೆ ಹೋಗಿಬಂದೆ. ನನ್ನ ಬಳಿ ಇದ್ದ ಹಣವೆಲ್ಲಾ ಖಾಲಿಯಾಗಿದೆ’ ಎಂದರು.

ಒಬ್ಬರ ಕತೆಯಲ್ಲ

‘ಇದು ಸೋಮಯ್ಯ ಅವರೊಬ್ಬರ ಕತೆಯಲ್ಲ. ಅಂಗವಿಕಲರು, ವೃದ್ಧರು, ವಿಧವೆಯರಿಗೆ ನೀಡುತ್ತಿದ್ದ ಮಾಸಾಶನವೂ ಹಲವು ತಿಂಗಳುಗಳಿಂದ ಪಾವತಿ ಆಗಿಲ್ಲ. ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ರಮಾನಾಥ ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.