ಮಂಗಳೂರು: ಸಮಾನ ಮನಸ್ಕ ಬ್ರಾಹ್ಮಣ ವೇದಿಕೆ ಅಡಿಯಲ್ಲಿ ಹಲವಾರು ಜನರು ಸೇರಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
ಇತ್ತೀಚೆಗೆ ಇಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖಂಡ ಶ್ರೀಧರ ಭಿಡೆ ಮಾತನಾಡಿ, ‘ಬ್ರಾಹ್ಮಣರು ದೇಶದ ಸಮಗ್ರ ಜನರನ್ನು ಪ್ರೀತಿಸುವ ಮತ್ತು ಸಮಾಜದ ಸುಧಾರಣೆಯ ನಾಯಕತ್ವವನ್ನು ವಹಿಸಿದವರು. ಹಿಂದೂ, ಮುಸ್ಲಿಂ, ಸಂತ ಪರಂಪರೆಯನ್ನು ಬೆಳೆಸಿದವರು. ನಾವು ಸಂಕುಚಿತರಾಗುವ ಪ್ರಶ್ನೆಯಿಲ್ಲ’ ಎಂದರು.
ಚಿಂತಕ ಪ್ರೊ. ರಾಜಾರಾಮ ತೋಳ್ಪಾಡಿ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಬರುತ್ತಿರುವಾಗ ಸಮಾನ ಮನಸ್ಕ ಬ್ರಾಹ್ಮಣರು ಆ ನಿಟ್ಟಿನಲ್ಲಿ ತಮ್ಮ ಸಮುದಾಯಕ್ಕೆ ಸತ್ಯ ಸಂದೇಶ ನೀಡಬೇಕಾಗಿದೆ ಎಂದರು.
ಬ್ಯಾಂಕ್ ನೌಕರ ಸಂಘದ ಪ್ರಮುಖ ಟಿ.ಆರ್.ಭಟ್ ಮಾತನಾಡಿ, ‘ಬ್ರಾಹ್ಮಣರೆಲ್ಲರೂ ನಿರ್ದಿಷ್ಟ ಸಿದ್ಧಾಂತ ಮತ್ತು ಪಕ್ಷಕ್ಕೆ ಸೇರಬೇಕು ಎಂಬ ನಿಲುವಿನ ವಿರುದ್ದ ನಾವು ಮಾತನಾಡಬೇಕಾಗಿದೆ. ದೇಶದ ಆಗುಹೋಗುಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ವಾತಾವರಣ ಉಳಿಯಬೇಕು’ ಎಂದರು.
ಕಾರ್ಯಕ್ರಮದ ಸಂಘಟಕ ಎಂ.ಜಿ. ಹೆಗಡೆ ಮಾತನಾಡಿ, ‘ಬಿಜೆಪಿ ಮತ್ತು ಕೋಮು ಸಂಘಟನೆಗಳಿಗೆ ಬೆಂಬಲಿಸದ ಬ್ರಾಹ್ಮಣರಿಗೆ ಕೌಟುಂಬಿಕ ಕಿರುಕುಳ ನೀಡುವುದು, ಸಾರ್ವಜನಿಕವಾಗಿ ಹೀಯಾಳಿಸುವ ಮೂಲಕ ಭಯದ ವಾತಾವರಣ ಹುಟ್ಟಿಸುತ್ತಿರುವವರಿಗೆ ಸರಿಯಾಗಿ ಉತ್ತರ ನೀಡುತ್ತೇವೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರ ನೀಡುವ ಸವಲತ್ತು ಸಿಗುವಂತೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಮತ್ತು ಎಲ್ಲ ಜಾತಿ ಧರ್ಮಗಳ ಜನರನ್ನು ಸಹಿಷ್ಣುತೆಯಿಂದ, ಪ್ರೀತಿಯಿಂದ ನೋಡುವ ಬ್ರಾಹ್ಮಣರನ್ನು ವ್ಯಾಪಕವಾಗಿ ಸಂಘಟಿಸಲಾಗುವುದು’ ಎಂದರು.
ಪ್ರಮುಖರಾದ ಗುರುರಾಜ ಆಚಾರ್ಯ, ಬೆಟ್ಟ ರಾಜಾರಾಮ ಭಟ್ಟ, ಮಹೇಶ್ಕುಮಾರ್ ಸುಳ್ಯ, ಸತ್ಯೇಂದ್ರ ವೇಣೂರು, ಶಿವಾನಂದ ಮುಂಡಾಜೆ, ರಮೇಶ್ ಕೋಟೆ, ಕೆ. ರಾಘವೇಂದ್ರ, ವಿನಯ ಆಚಾರ್ಯ, ದಿನೇಶ್ ರಾವ್, ಬಾಲಕೃಷ್ಣ ಭಟ್ಟ, ಕೆಮ್ಮಟ್ಟು ಸ್ವರ್ಣ ಭಟ್ಟ, ವಿದ್ಯಾ ಭಟ್ಟ, ನಮಿತಾ ರಾವ್, ಚೈತನ್ಯಾ ಭಟ್ಟ, ಪ್ರವೀಣ ಭಟ್ಟ ಪುತ್ತೂರು ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.