ಮಂಗಳೂರು: ನಗರದ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳೂರು ರಥೋತ್ಸವ ಪ್ರಯುಕ್ತ ಭಾನುವಾರ ವೀರ ವೆಂಕಟರಮಣ ದೇವರ ಅವಭ್ರತ (ಓಕುಳಿ) ಮಹೋತ್ಸವ ಸಂಭ್ರಮದಿಂದ ಜರುಗಿತು. ಕಾಶೀಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ, ಅಬಾಲ ವೃದ್ಧರಾದಿಯಾಗಿ ಸಮಾಜದ ಸಾವಿರಾರು ಭಕ್ತಾದಿಗಳ ಪಾಲ್ಗೊಂಡಿದ್ದರು.
ಆರಂಭದಲ್ಲಿ ಸರ್ವಾಲಂಕೃತ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ವಸಂತ ಮಂಟಪಕ್ಕೆ ತರಲಾಯಿತು. ಬಳಿಕ ವಸಂತ ಮಂಟಪದಲ್ಲಿ ವಿಶೇಷ ಪೂಜೆ, ಅಷ್ಟಾವಧಾನ ಸೇವೆ, ಸಮಾಜ ಬಾಂಧವರಿಂದ ಸೇವೆಗಳು ನಡೆದವು. ಸಂಯಮಿಂದ್ರ ತೀರ್ಥ ಸ್ವಾಮೀಜಿ ಪ್ರವಚನ ನೀಡಿದರು.
ದೇವರನ್ನು ಸ್ವರ್ಣ ಪಲ್ಲಕಿಯಲ್ಲಿರಿಸಿ, ಐದು ಪೇಟೆ ಉತ್ಸವ ಭಾವುಕ ಭಗವತ್ ಭಕ್ತರ ಭುಜ ಸೇವೆಯೊಂದಿಗೆ ಜರುಗಿತು. ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಅವಭೃತ ಮಹೋತ್ಸವದಲ್ಲಿ ಗುಲಾಬಿ, ಅರಸಿನ ಬಣ್ಣದ ನೀರಿನೊಂದಿಗೆ ಆಟವಾಡುತ್ತಿರುವ ದೃಶ್ಯ ರಥಬೀದಿಯಲ್ಲಿ ಕಂಡು ಬಂತು.
ದೇವರ ಪೇಟೆ ಉತ್ಸವ ರಥಬೀದಿ, ನಂದಾ ದೀಪ, ಉಮಾ ಮಹೇಶ್ವರ ದೇವಸ್ಥಾನ ರಸ್ತೆ, ಕೆಳಗಿನ ರಥ ಬೀದಿ, ಡೋಂಗೇರಕೇರಿ, ಚಾಮರಗಲ್ಲಿ, ವಿ.ಟಿ. ರಸ್ತೆಯ ಮೂಲಕ ಟ್ಯಾಂಕ್ ಕಾಲೊನಿಯಲ್ಲಿರುವ ಶ್ರೀನಿವಾಸ ನಿಗಮಗಮ ಪಾಠಶಾಲೆಯಲ್ಲಿರುವ ಪುಷ್ಕರಣಿಯಲ್ಲಿ ದೇವರ ಅವಭೃತ ಸ್ನಾನ ನಡೆಯಿತು. ದೇವಳಕ್ಕೆ ಉತ್ಸವ ಮರಳಿದ ಬಳಿಕ ಧ್ವಜ ಅವರೋಹಣ ಬಳಿಕ ಮಹೋತ್ಸವ ಮುಕ್ತಾಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.