ಉಳ್ಳಾಲ: ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದಾಗ ತನ್ನ ಮೇಲೆ ಮೂವರು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಕೆ.ಸಿ.ರೋಡ್ ನಿವಾಸಿ ಕಿಶೋರ್ (48) ಎಂಬುವರು ದೂರು ಹೇಳಿಕೊಂಡಿದ್ದು, ಪೊಲೀಸರು ತನಿಖೆ ನಡೆಸಿದಾಗ ಇಂತಹ ಯಾವುದೇ ಪ್ರಕರಣ ನಡೆಯದೇ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ದೂರುದಾರನ ವಿರುದ್ಧವೇ ಪ್ರಕರಣ ದಾಖಲಾಗಿದೆ.
ತನ್ನ ಮೇಲೆ ಹಲ್ಲೆ ಮೂವರು ತಲವಾರು ದಾಳಿ ನಡೆಸಲು ಬಂದಿದ್ದರು ಎಂದು ಕಿಶೋರ್, ಸ್ಥಳೀಯ ಅಂಗಡಿ ಮಾಲೀಕ ಮೊಹಮ್ಮದ್ ಇಸಾಕ್ ಎಂಬುವರಿಗೆ ತಿಳಿಸಿದ್ದ. ತಕ್ಷಣ ಅವರು ಅಂಗಡಿ ಬಳಿಯಿದ್ದ ಮೂವರು ಗ್ರಾಹಕರಲ್ಲಿ ಘಟನೆ ನಡೆದ ಸ್ಥಳಕ್ಕೆ ತೆರಳಿ ನೋಡುವಂತೆ ತಿಳಿಸಿದ್ದಾರೆ. ಆದರೆ ಸ್ಥಳದಲ್ಲಿ ಯಾರು ಕಂಡುಬರಲಿಲ್ಲ. ನಂತರ ಮೊಹಮ್ಮದ್ ಇಸಾಕ್ ಅವರು ಸ್ಥಳೀಯ ಮುಸ್ಲಿಂ ಯುವಕರ ಬಳಿ ಬೈಕಿನಲ್ಲೇ ಕಿಶೋರ್ ಅವರನ್ನು ಮನೆಗೆ ಬಿಟ್ಟುಬರುವಂತೆ ತಿಳಿಸಿದ್ದಾರೆ. ಮನೆಯಲ್ಲೂ ಪತ್ನಿ ಹಾಗೂ ಪುತ್ರನಲ್ಲಿ ತಲವಾರು ಹಲ್ಲೆಗೆ ಯತ್ನಿಸಿರುವ ಕಟ್ಟುಕತೆ ಹೇಳಿದ್ದು, ಅವರ ಪುತ್ರನೂ ಅಂಗಡಿ ಬಳಿಗೆ ಬಂದು ತಲವಾರು ದಾಳಿಗೆ ಯತ್ನಿಸಿರುವ ಕುರಿತು ತಿಳಿಸಿದ್ದ. ಬಳಿಕ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೊಣಾಜೆ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರಲ್ಲಿ ಆತಂಕ ಮೂಡಿತ್ತು. ಪೊಲೀಸ್ ಕಮಿಷನರ್ ಶಶಿಕುಮಾರ್ ಅವರೇ ಕಲ್ಲಾಪು ಪೊಲೀಸ್ ಆಯುಕ್ತರ ಕಚೇರಿಗೆ ಬಂದು, ಕಿಶೋರ್ನನ್ನು ವಿಚಾರಿ ಸಿದ್ದು, ಆತ ಹೇಳಿಕೆ ಬದಲಾ ಯಿಸಿದ್ದಾನೆ. ಅಲ್ಲದೆ, ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿ ಕೊಂಡಿದ್ದಾನೆ ಎಂದು ಉಳ್ಳಾಲ ಠಾಣಾಧಿಕಾರಿ ಸಂದೀಪ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.