
ಮಂಗಳೂರು: ಪುಟಾಣಿಗಳು ತಲೆ ಮೇಲೆ ಪುಸ್ತಕ ಇಟ್ಟು ಸಮತೋಲನ ಕಾಯ್ದುಕೊಳ್ಳುತ್ತಾ ಓಡಿದರು, ನಿಂಬೆ ಹಣ್ಣಿರುವ ಚಮಚವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದರು, ಎರಡೂ ಕಾಲುಗಳನ್ನು ಗೋಣಿ ಚೀಲದೊಳಗೆ ಹಾಕಿ ಓಡಿದರು, 100 ಮೀ ವೇಗದ ಓಟದಲ್ಲೂ ಹುರುಪಿನಿಂದ ಪಾಲ್ಗೊಂಡರು. ಸೋಲು ಗೆಲುವುಗಳ ಮರೆತು, ಕುಣಿದು ಕುಪ್ಪಳಿಸುತ್ತಾ, ಕೇಕೆ ಹಾಕುತ್ತಾ, ಗೆಳೆಯರ ಗೆಲುವನ್ನೂ ತಮ್ಮದೇ ಗೆಲುವು ಎಂದು ಚಿಣ್ಣರು ಸಂಭ್ರಮಿಸಿದರು.
ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಮತ್ತು ಮಂಗಳೂರು ಸಿಟಿ ರೋಟರಾಕ್ಟ್ ಕ್ಲಬ್ಗಳ ಆಶ್ರಯದಲ್ಲಿ ಉರ್ವ ಕೆನರಾ ಶಾಲೆಯ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ರೋಟರಿ 25ನೇ ವಾರ್ಷಿಕ ಚಿಣ್ಣರ ಉತ್ಸವ ಎಳೆಯರ ಮನದಲ್ಲಿ ಉತ್ಸಾಹದ ಬುಗ್ಗೆ ಚಿಮ್ಮುವಂತೆ ಮಾಡಿತು.
ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದಲ್ಲಿ ಆಶ್ರಯ ಪಡೆದ ವಿದ್ಯಾರ್ಥಿಗಳು ಬೆಳಿಗ್ಗೆ ವಿವಿಧ ಆಟ–ಕೂಟಗಳಲ್ಲಿ ಭಾಗವಹಿಸಿ ಕ್ರೀಡಾ ಸಾಮರ್ಥ್ಯ ತೋರಿದರೆ, ಮಧ್ಯಾಹ್ನ ಗಾಯನ, ನೃತ್ಯ, ನಾಟಕ ಮೊದಲಾದ ಕಲಾಕೌಶಲಗಳನ್ನು ಪ್ರದರ್ಶಿಸಿದರು.
ಸ್ಪರ್ಧಾಕೂಟವನ್ನು ಉದ್ಘಾಟಿಸಿದ ಸಿನಿಮಾ ನಟ, ಸಂಗೀತ ನಿರ್ದೇಶಕ ಗುರುಕಿರಣ್, ‘ರೋಟರಿ ಸಂಸ್ಥೆಯವರು ಚಿಣ್ಣರಿಗಾಗಿ ವಿನೂತನ ಪರಿಕಲ್ಪನೆಯ ಸ್ಪರ್ಧಾ ಕೂಟವನ್ನು ಆಯೋಜಿಸಿದೆ. ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸುವ ಈ ಕೂಟ ಪ್ರಶಂಸನೀಯ. ಮಕ್ಕಳ ಸೇವೆ ದೇವರ ಸೇವೆಗೆ ಸಮಾನ’ ಎಂದರು.
‘ಕಾಲವನ್ನು ತಡೆಯೋರು ಯಾರೂ ಇಲ್ಲ...’ ಹಾಡು ಹಾಡುವ ಮೂಲಕ ಮಕ್ಕಳನ್ನು ರಂಜಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನಾ ಅಧ್ಯಕ್ಷ ಡಾ.ದೇವದಾಸ್ ರೈ, ‘25ನೇ ವವರ್ಷದ ಚಿಣ್ಣರ ಉತ್ಸವ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರ ಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಎಲ್ಲ ಮಕ್ಕಳೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಕೊಳ್ಳಬೇಕು ಎಂಬುದು ನಮ್ಮ ಆಶಯ’ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ಸ್ವಾಗತಿಸಿದರು. ಜಿಲ್ಲಾ ರೋಟರಿ ವಲಯ ಸಹಾಯಕ ಗವರ್ನರ್ ಚಿನ್ನಗಿರಿ ಗೌಡ ಮತ್ತು ವಲಯ ಪ್ರತಿನಿಧಿ ರವಿ ಜಲನ್ ಗೌರವ ಅತಿಥಿಗಳಾಗಿದ್ದರು. ರೋಟರಾಕ್ಟ್ ಸಂಸ್ಥೆ ಅಧ್ಯಕ್ಷ ಅಕ್ಷಯ್ ರೈ, ಕಾರ್ಯದರ್ಶಿ ವಿವೇಕ್ ರಾವ್ ಭಾಗವಹಿಸಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಕಾಸ್ ಕೊಟ್ಯಾನ್ ವಂದಿಸಿದರು. ಕೆ.ಎಂ.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಚುನಾಯಿತ ಗವರ್ನರ್ ಸತೀಶ್ ಬೋಳಾರ್ ಅವರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ವಿವಿಧ ಕ್ರೀಡಾ ಹಾಗೂ ಮೋಜಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಗಾಯನ, ನೃತ್ಯ, ನಾಟಕಗಳ ಮೂಲಕ ಚಿಣ್ಣರ ಕಲಾ ಪ್ರತಿಭೆ ಅನಾವರಣ ಗಮನ ಸೆಳೆಯಿತು ಮಕ್ಕಳ ಆಕರ್ಷಕ ಪಥ ಸಂಚಲನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.