
ಮಂಗಳೂರು: ‘ದ್ವೇಷ ಭಾಷಣ ತಡೆ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಿರಸ್ಕರಿಸಿಲ್ಲ, ಹಿಂದಕ್ಕೂ ಕಳುಹಿಸಿಲ್ಲ. ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ. ರಾಜ್ಯಪಾಲರು ಬಯಸಿದರೆ ಮಸೂದೆ ಬಗ್ಗೆ ವಿವರಣೆ ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹೇಳಿದರು.
ಮಸೂದೆ ವಿರೋಧಿಸಿ ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡುವ ಕುರಿತು ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಪಾಲರು ಯಾವಾಗ ಕರೆಯುತ್ತಾರೆ ನೋಡೋಣ. ಮಸೂದೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ’ ಎಂದು ಹೇಳಿದರು.
ಬಳ್ಳಾರಿಯಿಂದ ಬೆಂಗಳೂರಿಗೆ ಬಿಜೆಪಿ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, ‘ಪಾದಯಾತ್ರೆ ಮಾಡಲಿ. ಬೇಡ ಎಂದವರು ಯಾರು. ಬಿಜೆಪಿಯವರು, ಅದರಲ್ಲೂ ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು ಕಾಯುತ್ತಾ ಇದ್ದಾರೆ. ಅಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅಸೂಯೆಯಿಂದ ಹೀಗೇ ಮಾಡುತ್ತಿದ್ದಾರೆ’ ಎಂದರು.
‘ನಾವು ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿದ್ದು ಒಳ್ಳೆಯ ವಿಚಾರಕ್ಕಾಗಿ. ರೆಡ್ಡಿ ಸಹೋದರರು ರಿಪಬ್ಲಿಕ್ ಆಫ್ ಬಳ್ಳಾರಿ ನಡೆಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿ ಕೊಟ್ಟಿದ್ದರು. ವಿಧಾನಸಭೆಯಲ್ಲಿ ಚರ್ಚಿಸಿದಾಗ ರೆಡ್ಡಿ ಸಹೋದರರು ಮತ್ತು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ಮುಗಿಬಿದ್ದಿದ್ದರು. ಅದಕ್ಕಾಗಿ ಪಾದಯಾತ್ರೆ ಮಾಡಿದ್ದೆವು’ ಎಂದರು.
‘ಬಿಜೆಪಿಯವರು ಏತಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮಿಕಿ ಪ್ರತಿಮೆ ಉದ್ಘಾಟನೆ ಬ್ಯಾನರ್ ಹಾಕಿದ್ದನ್ನು ತೆಗೆದವರು ಯಾರು. ತೆಗೆಯುವ ಅಗತ್ಯ ಏನಿತ್ತು. ಅದರಿಂದಲೇ ಪ್ರಚೋದನೆ ಆಗಿದ್ದಲ್ಲವೇ? ಬ್ಯಾನರ್ ತೆಗೆಯದೇ ಇದ್ದಿದ್ದರೆ ಪ್ರಚೋದನೆ ಎಲ್ಲಿ ಆಗುತ್ತಿತ್ತು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.