ADVERTISEMENT

ಕೋಸ್ಟಲ್‌ ಫಿಲ್ಮ್‌ ಅವಾರ್ಡ್‌– ಜೂನ್‌ 4ರಂದು ಪ್ರದಾನ

ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಸಭಾಂಗಣದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಮೇ 2023, 16:24 IST
Last Updated 23 ಮೇ 2023, 16:24 IST
ಸುದ್ದಿಗೋಷ್ಠಿಯಲ್ಲಿ ವಿಜಯ್‌ಕುಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿದರು. ಕಾರ್ತಿಕ್‌ ರೈ, ಸಂದೇಶ್‌ರಾಜ್‌ ಬಂಗೇರ ಹಾಗೂ ಇತರರು ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ವಿಜಯ್‌ಕುಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿದರು. ಕಾರ್ತಿಕ್‌ ರೈ, ಸಂದೇಶ್‌ರಾಜ್‌ ಬಂಗೇರ ಹಾಗೂ ಇತರರು ಇದ್ದಾರೆ   

ಮಂಗಳೂರು: ತುಳು ಸಿನಿಮಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನೀಡುವ ‘ಕೋಸ್ಟಲ್‌ ಫಿಲ್ಮ್‌ ಅವಾರ್ಡ್‌’ ಪ್ರದಾನ ಸಮಾರಂಭ ಜೂನ್‌ 4ರಂದು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ 7ರವರೆಗೆ ನಡೆಯಲಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮ ಆಯೋಜಕ ಸಂದೇಶ್‌ ರಾಜ್‌ ಬಂಗೇರ, ‘ಒಟ್ಟು 28 ವರ್ಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. 2020ರ ಜನವರಿಯಿಂದ 2022ರ ಡಿಸೆಂಬರ್‌ವರೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಿದ್ದೇವೆ. ಒಟಿಟಿಗಳಲ್ಲಿ ಮಾತ್ರ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸುವುದಿಲ್ಲ. ಜೀವಮಾನ ಸಾಧನೆ ಪ್ರಶಸ್ತಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಹಾಗೂ ವರ್ಸಟೈಲ್‌ ಆ್ಯಕ್ಟರ್‌ ಪ್ರಶಸ್ತಿಯನ್ನೂ ಪ್ರದಾನ ಮಾಡಲಿದ್ದೇವೆ’ ಎಂದು ತಿಳಿಸಿದರು.

‘ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನ ತಾರೆಯರು, ತುಳು ಸಿನಿಮಾ ರಂಗದ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ. ತಾರೆಯರೇ ನಡೆಸಿಕೊಡುವ 10 ನೃತ್ಯ ಕಾರ್ಯಕ್ರಮಗಳು ಹಾಗೂ ಪ್ರಕಾಶ್‌ ಮಹಾದೇವನ್‌ ತಂಡವು ನಡೆಸಿಕೊಡುವ ರಸಮಂಜರಿ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ’ ಎಂದರು.

ADVERTISEMENT

ಸಿನಿಮಾ ನಿರ್ದೇಶಕ ವಿಜಯ್‌ಕುಮಾರ್‌ ಕೊಡಿಯಾಲ್‌ಬೈಲ್‌, ‘ತುಳು ಸಿನಿಮಾದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೂ ಕೋಸ್ಟಲ್‌ ವುಡ್‌ ಪ್ರಶಸ್ತಿ ನೀಡುವ ಮೂಲಕ ಉತ್ತೇಜನ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ತಂತ್ರಜ್ಞರಿಂದ ಹಿಡಿದು ಕಲಾವಿದರವರೆಗೆ ಎಲ್ಲರ ಸಾಧನೆಗೂ ಮನ್ನಣೆ ಸಿಗಬೇಕು. ಎಲ್ಲರಲ್ಲೂ ಪ್ರಶಸ್ತಿ ಪಡೆಯುವ ಹಂಬಲ ಬೆಳೆಯಬೇಕು. ಈ ಕಾರ್ಯಕ್ರಮದಲ್ಲಿ ತುಳು ಸಿನಿಮಾ ರಂಗದ ಎಲ್ಲ ತಂತ್ರಜ್ಞರು ಮತ್ತು ಕಲಾವಿದರು ಭಾಗವಹಿಸಬೇಕು’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯ್‌ ಕುಮಾರ್‌, ‘ತುಳು ಸಿನಿಮಾಗಳ‌‌‌ ಫಿಲ್ಮ್‌ ಛೇಂಬರ್‌ ಗಟ್ಟಿಗೊಳಿಸುವ ಅಗತ್ಯವಿದೆ. ಇದರಿಂದ ತುಳು ಚಿತ್ರಗಳ ನಡುವೆಯೇ ಅನಗತ್ಯ ಪೈಪೋಟಿ ಉಂಟಾಗುವುದನ್ನು ತಪ‍್ಪಿಸಬಹುದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಯಶ್‌ರಾಜ್‌, ಪ್ರೇಮ್‌ ಶೆಟ್ಟಿ, ಕಾರ್ತಿಕ್‌ ರೈ ಹಾಗೂ ಉದಯ್‌ ಬಲ್ಲಾಳ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.