ಮಂಗಳೂರು: ‘ಅಗ್ನಿಪಥ‘ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ‘ಅಗ್ನಿಪಥ ಯೋಜನೆಯಡಿ ಸೇನೆ ಸೇರುವವರ ನೊಂದಣಿ ಕೇಂದ್ರಗಳನ್ನುಬಿಜೆಪಿಯ ಯುವ ಮೋರ್ಚಾ ಆರಂಭಿಸುತ್ತಿದೆ. ಇದು ಸೇನೆಯಲ್ಲೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಈ ಯೋಜನೆ ಅಡಿ 17 ವರ್ಷದಿಂದ 23 ವರ್ಷದೊಳಗಿನರು ಮಾತ್ರ ಸೇನಾ ತರಬೇತಿ ಪಡೆಯಬಹುದು. ಯುವಜನರು ಪಿ.ಯು. ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸೇನೆಗೆ ಸೇರಬೇಕಾಗುತ್ತದೆ. ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಮುಂದೆ ಅವರ ಪಾಡೇನು’ ಎಂದು ಅವರು ಪ್ರಶ್ನಿಸಿದರು.
‘ಬಿಜೆಪಿ ಯುವಜನರ ದಾರಿ ತಪ್ಪಿಸುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನುಬಿಜೆಪಿ ನೀಡಿತ್ತು. ಈಗ ವರ್ಷಕ್ಕೆ 2 ಸಾವಿರ ಉದ್ಯೋಗವನ್ನು ಸೃಷ್ಟಿಸುವುದಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ಟೀಕಿಸಿದರು
ಕಾಂಗ್ರೆಸ್ ಮುಖಂಡ ಜೆ.ಆರ್.ಲೋಬೊ, ‘ಅಗ್ನಿಪಥ ಯೋಜನೆಯಿಂದ ನಿರುದ್ಯೋಗ ನಿವಾರಣೆ ಆಗಲಿದೆ ಎಂಬುದು ಮಿಥ್ಯೆ. ಬಂಡವಾಳ ಹೂಡಿಕೆಯಿಂದ ಮಾತ್ರ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯ’ ಎಂದರು.
ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ದಾಸ್, ‘ಬಿಜೆಪಿ ಆಡಳಿತ ಆರಂಭವಾದ ಬಳಿಕ ಜನಸಮಾನ್ಯರು ನೆಮ್ಮದಿಯಿಂದ ಬದುಕುವ ವಾತಾವರಣವೇ ಇಲ್ಲ’ ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ಪ್ರವೀಣಚಂದ್ರ ಆಳ್ವ, ಅಬ್ದುಲ್ ಸಲಿಂ, ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಸುನೀಲ್ ಪೂಜಾರಿ, ಜಯರಾಜ್ ಕೋಟ್ಯಾನ್,ರಾಕೇಶ್ ದೇವಾಡಿಗ, ಗಿರೀಶ್ ಶೆಟ್ಟಿ, ಮಂಜುಳ ನಾಯಕ್, ಆಸೀಫ್ ಬೆಂಗ್ರೆ ಚೇತನ್ ಬೆಂಗ್ರೆ, ಹೈದರ್ ಆಲಿ, ಲಕ್ಷ್ಮಣ್ ಶೆಟ್ಟಿ, ಕೃತಿನ್ ಕುಮಾರ್, ಉದಯ್ ಕುಂದರ್, ಯೋಗೇಶ್ ಆಚಾರ್ಯ, ಶಾನ್ ಡಿಸೋಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.