ADVERTISEMENT

ಇಂಧನ ಬೆಲೆ ಹೆಚ್ಚಳಕ್ಕೆ ತೀವ್ರ ವಿರೋಧ

ಕಾಂಗ್ರೆಸ್‌ ಕಾರ್ಯಕರ್ತರಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 4:39 IST
Last Updated 13 ಜೂನ್ 2021, 4:39 IST
ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು.
ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು.   

ಪುತ್ತೂರು: ‘ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾಗುವುದನ್ನು ನೋಡಿದಾಗ ಅಚ್ಛೇ ದಿನ್ ಬಂದಿದೆ ಎಂದು ಗೊತ್ತಾಗುತ್ತದೆ. ವಿಶ್ವಕ್ಕೆ ಗುರು ಭಾರತ ಎನ್ನುವವರ ಆಡಳಿತ ವೈಖರಿ ಇದೆಂದು ಕಾಣುತ್ತದೆ’ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಲೇವಡಿ ಮಾಡಿದರು.

ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕಳೆದ ಆರು ತಿಂಗಳುಗಳಲ್ಲಿ 48 ಬಾರಿ ಪೆಟ್ರೋಲ್ ದರ ಏರಿಕೆಯಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಒಂದು ಬ್ಯಾರಲ್‌ಗೆ 140 ಡಾಲರ್ ಬೆಲೆ ಇದ್ದರೂ ನಮ್ಮಲ್ಲಿ ₹ 60ರಿಂದ ₹ 70ಕ್ಕೆ ಒಂದು ಲೀಟರ್ ಪೆಟ್ರೋಲ್ ದೊರೆಯುತ್ತಿತ್ತು. ಆದರೆ ಇಂದು ಬ್ಯಾರಲ್‌ಗೆ ₹ 60 ಇದ್ದಾಗ ದುಪ್ಪಟ್ಟು ದರದಲ್ಲಿ ಗ್ರಾಹಕರಿಗೆ ಪೆಟ್ರೋಲ್ ದೊರೆಯುತ್ತಿದೆ’ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ, ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಮಹಮ್ಮದ್ ಬಡಗನ್ನೂರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರನಾಥ್ ಮಾತನಾಡಿದರು.

ADVERTISEMENT

ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಸಾಮಾಜಿಕ ಜಾಲತಾಣದ ಸಂಯೋಜಕ ಪೂರ್ಣೇಶ್, ಬ್ಲಾಕ್ ಕಾಂಗ್ರೆಸ್ ಖಜಾಂಚಿ ವಲೇರಿಯನ್ ಡಯಾಸ್, ರಾಜೀವ್ ಗಾಂಧಿ ತಾಲ್ಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಭಂಡಾರಿ, ನಗರಸಭೆ ಸದಸ್ಯ ರಿಯಾಜ್ ಇದ್ದರು.

ಕೇಂದ್ರ ಸರ್ಕಾರದಿಂದ ಸುಲಿಗೆ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೂಲಕ ಜನತೆಯ ಹಣವನ್ನು ಲೂಟಿಗೈಯ್ಯುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಜನರು ಆರ್ಥಿಕ ತೊಂದರೆಯಲ್ಲಿರುವಾಗ ಸರ್ಕಾರ ತೈಲ ಬೆಲೆ ಏರಿಸಿ ಸುಲಿಗೆ ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು.

ತೈಲ ಬೆಲೆ ಏರಿಕೆ ವಿರುದ್ಧ ಪುತ್ತೂರು ಬ್ಲಾಕ್ ಯುವಕ ಕಾಂಗ್ರೆಸ್ ವತಿಯಿಂದ ನಗರದ ದರ್ಬೆ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಮಾತನಾಡಿ, ‘ತೈಲ ಬೆಲೆ ಏರಿಕೆ ಮೂಲಕ ಜನರಿಗೆ ಬದುಕಲು ಬಿಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ’ ಎಂದರು.

ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಯುವ ಮುಖಂಡ ಕಮಲೇಶ್ ದೋಳ, ಪುರಸಭೆಯ ಮಾಜಿ ಉಪಾಧ್ಯಕ್ಷ ಲಾನ್ಸಿ ಮಸ್ಕರೇನಸ್, ಪ್ರಮುಖರಾದ ಸನದ್ ಯೂಸುಫ್, ರಾಬಿನ್ ತಾವ್ರೋ, ಪರಮೇಶ್ವರ್ ಭಂಡಾರಿ, ಅನ್ವರ್ ಖಾಸಿಂ, ಮಹಾಲಿಂಗ ನಾಯ್ಕ, ನೇಮಾಕ್ಷ ಸುವರ್ಣ, ಕೆ.ಸಿ ಅಶೋಕ್ ಶೆಟ್ಟಿ, ಫಾರೂಕ್ ಬಾಯಬ್ಬೆ, ಜಗದೀಶ್ ಕಜೆ ಇದ್ದರು.

ಸತ್ಯ ಅರಿವಾಗುತ್ತಿದೆ: ರಮಾನಾಥ ರೈ

ಬಂಟ್ವಾಳ: ಇಲ್ಲಿನ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಘಟಕ ಮತ್ತು ಯುವ ಕಾಂಗ್ರೆಸ್ ಘಟಕ ವತಿಯಿಂದ ತಾಲ್ಲೂಕಿನ ಏಳು ಪೆಟ್ರೋಲ್ ಬಂಕ್ ಬಳಿ ಇಂಧನ ಬೆಲೆ ಏರಿಕೆ ವಿರುದ್ಧ ‘100 ನಾಟೌಟ್’ ಪ್ರತಿಭಟನೆ ಶನಿವಾರ ನಡೆಯಿತು.

ಇಲ್ಲಿನ ಬಿ.ಸಿ.ರೋಡು, ಬಂಟ್ವಾಳ, ಮೆಲ್ಕಾರ್, ಕಲ್ಲಡ್ಕ ಮತ್ತಿತರ ಕಡೆ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಬಾವುಟ ಹಿಡಿದು ಪ್ರತಿಭಟನಕಾರರು ಘೋಷಣೆ ಕೂಗಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರ ವಿರುದ್ಧ ನಿರಂತರವಾಗಿ ನಡೆಸುತ್ತಿದ್ದ ಟೀಕಾ ಪ್ರಹಾರ ಮತ್ತು ಕೆಲವೊಂದು ಎಚ್ಚರಿಕೆ ಸಂದೇಶಗಳು ಸತ್ಯ ಸಂಗತಿ ಎಂಬುದು ಈಗ ದೇಶದ ಜನರಿಗೆ ಅರಿವಾಗುತ್ತಿದೆ’ ಎಂದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ ಜೈನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾ ಸದಸ್ಯೆ ಜಾಸ್ಮಿನ್ ಡಿಸೋಜ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಆಲ್ಬರ್ಟ್ ಮಿನೇಜಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಜೋರ, ಇಬ್ರಾಹಿಂ ನವಾಜ್ ಬಡಕಬೈಲ್, ಮಾಜಿ ಅಧ್ಯಕ್ಷ ಪ್ರಶಾಂತ ಕುಲಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಆಳ್ವ, ಪ್ರಮುಖರಾದ ಕೆ. ಮಾಯಿಲಪ್ಪ ಸಾಲ್ಯಾನ್, ಶೋಭಿತ್ ಪೂಂಜಾ, ಮಧುಸೂದನ್ ಶೆಣೈ, ಮಹಮ್ಮದ್ ನಂದಾವರ, ಸಿದ್ದಿಕ್ ಸೇರವ್, ಐಡಾ ಸುರೇಶ್, ಕುಶಲ, ಗಾಯತ್ರಿ ಸಪಲ್ಯ, ಸ್ವಪ್ನಾ, ಜಗದೀಶ್ ಕೊಯಿಲ, ಸದಾನಂದ ಶೆಟ್ಟಿ, ಮೋಹನ್ ಶೆಟ್ಟಿ, ದೇವಪ್ಪ ಕುಲಾಲ್, ರವಿ ಪೂಜಾರಿ, ಕೇಶವ ಪೂಜಾರಿ, ಶೇಖರ್ ಶೆಟ್ಟಿ, ರಾಜೇಶ್ ಗೌಡ, ಪ್ರವೀಣ್, ವಿಕ್ಟರ್ ಪಾಯಸ್, ಮನೋಜ್, ದೀಪಕ್, ನವನೀತ್, ದಿನೇಶ್ ಶೆಟ್ಟಿ, ಶರಣ್, ಮೋನಪ್ಪ ಆಚಾರ್ಯ, ಕಾರ್ತಿಕ್, ವಿನೋದ್, ಸುಮಿತ್, ವಿಶ್ವನಾಥ್ ಶೆಟ್ಟಿ, ಉದಯ, ಚೇತನ್, ಮೋಹನ ಪೂಜಾರಿ, ಅನಿಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಹಿಂದುಳಿದವರ ಬದುಕಿಗೆ ಪೆಟ್ಟು’

ಮಂಗಳೂರು: ಸರ್ಕಾರದ ಜನವಿರೋಧಿ ನೀತಿಯಿಂದ ಬಡ ಜನರ ಪಾಡು ದುಸ್ತರವಾಗಿದೆ. ಹಿಂದುಳಿದ ಸಮಾಜ ಇದನ್ನು ಅರ್ಥೈಸಬೇಕಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.

ತೈಲ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾ ಘಟಕದ ವತಿಯಿಂದ ನಗರದ ಮಣ್ಣಗುಡ್ಡೆ ಪೆಟ್ರೋಲ್ ಬಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಪೆಟ್ರೋಲ್ ಏರಿಕೆಯಿಂದಾಗಿ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಹಿಂದುಳಿದ ವರ್ಗಗಳ ಜನರ ಬದುಕಿಗೆ ದೊಡ್ಡ ಆಘಾತವಾಗಿದೆ ಎಂದರು.

ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರು ಹಾಗೂ ಹಿಂದುಳಿದ ವರ್ಗದ ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದರು.

ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲ್ಯಾನ್, ಸದಾಶಿವ ಉಳ್ಳಾಲ್, ಪದಾಧಿಕಾರಿಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಭಾಸ್ಕರ್ ಕೆ., ನವೀನ್ ಡಿಸೋಜ, ಕೇಶವ ಮರೊಳಿ, ಅಶ್ರಫ್, ಗಣೇಶ್ ಪೂಜಾರಿ, ಟಿ.ಕೆ. ಸುಧೀರ್, ಉದಯ ಕುಂದರ್,

ಉಮೇಶ ದಂಡಕೇರಿ, ರಘುರಾಜ್ ಕದ್ರಿ, ಮೆರಿಲ್ ರೇಗೋ, ಚೇತನ್ ಕುಮಾರ್, ಶಾಂತಲಾ ಗಟ್ಟಿ, ರಾಜೇಂದ್ರ ಚಿಲಿಂಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.