ಮಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ತನ್ನ ದೊಡ್ಡಪ್ಪನ ಮಗನನ್ನೇ ಕೊಲೆ ಮಾಡಿದ್ದ ಯುವಕನಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಟ್ವಾಳ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿ ರಾಜೇಶ ಯಾನೆ ನವೀನ ಶಿಕ್ಷೆಗೊಳಗಾದ ಯುವಕ. ಈತ ತನ್ನ ದೊಡ್ಡಪ್ಪನ ಮಗ ರಂಜಿತ್ ಎಂಬುವರನ್ನು 2017ರ ಮೇ 15ರಂದು ರಾತ್ರಿ ಕೊಲೆ ಮಾಡಿದ್ದ.
ಪ್ರಕರಣ ವಿವರ: ಶಿಕ್ಷೆಗೊಳಗಾದ ರಾಜೇಶ ಮತ್ತು ಕೊಲೆಯಾದ ರಂಜಿತ್ ಅಣ್ಣ-ತಮ್ಮಂದಿರ ಮಕ್ಕಳು. ಇವರ ಮನೆಗಳು ಆಸುಪಾಸಿನಲ್ಲಿದ್ದವು. ಆರೋಪಿ ರಾಜೇಶನಿಗೆ ವಿಪರೀತ ಮದ್ಯ ಸೇವನೆ ಚಟವಿತ್ತು. ರಂಜಿತ್ ಹಲವು ಬಾರಿ ರಾಜೇಶನಿಗೆ ಬುದ್ಧಿ ಮಾತು ಹೇಳಿದ್ದು, ಇದರಿಂದ ರಂಜಿತ್ ಮೇಲೆ ರಾಜೇಶನಿಗೆ ವೈಮನಸ್ಸು ಉಂಟಾಗಿತ್ತು.
2017ರ ಮೇ 15ರಂದು ರಾತ್ರಿ 10 ಗಂಟೆಯ ವೇಳೆಗೆ ರಂಜಿತ್ ತನ್ನ ಮನೆಗೆ ಹೋಗಿದ್ದ. ಈ ವೇಳೆ ರಾಜೇಶ್ ಚೂರಿಯಿಂದ ರಂಜಿತ್ನ ಗಂಟಲಿಗೆ ಬಲವಾಗಿ ತಿವಿದ. ಅದನ್ನು ತಡೆಯಲು ಮುಂದಾದ ಗಣೇಶ್ ಪೂಜಾರಿ ಅವರ ಬಲಕೈಗೂ ಚೂರಿಯಿಂದ ಗಾಯವಾಗಿತ್ತು. ಆಗ ಅಕ್ಕಪಕ್ಕದವರು ಕೂಡ ಓಡಿ ಬಂದು ತೀವ್ರ ಗಾಯಗೊಂಡ ರಂಜಿತ್ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿದ್ದ ನಾಗೇಶ್ ಡಿ.ಎಲ್. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ವಿಚಾರಣೆ ನಡೆಸಿದರು. 19 ಮಂದಿ ಸಾಕ್ಷಿದಾರರು ನುಡಿದ ಸಾಕ್ಷವನ್ನು ಪರಿಗಣಿಸಿ ಆರೋಪಿಯೇ ಕೊಲೆ ಮಾಡಿರುವುದನ್ನು ಸಾಬೀತಾಗಿದೆ ಎಂದು ತೀರ್ಪು ನೀಡಿದರು.
ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ₹10ಸಾವಿರ ದಂಡ, ಅಕ್ರಮ ಪ್ರವೇಶ ಮಾಡಿರುವುದಕ್ಕೆ 1 ತಿಂಗಳು ಸಜೆ ಮತ್ತು ₹200 ದಂಡ, ಗಣೇಶ ಪೂಜಾರಿ ಅವರಿಗೆ ಹಲ್ಲೆ ಮಾಡಿರುವುದಕ್ಕೆ 6 ತಿಂಗಳು ಶಿಕ್ಷೆ ಹಾಗೂ ಮೃತ ರಂಜಿತ್ ಅವರ ತಂದೆಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.