ADVERTISEMENT

ಕೋವಿಡ್‌ ಮುಕ್ತ ಸಮಾಜಕ್ಕೆ ಶ್ರಮಿಸೋಣ: ಶಾಸಕ ಉಮಾನಾಥ ಕೋಟ್ಯಾನ್

ಕಾರ್ಯಪಡೆ ಸಭೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 13:21 IST
Last Updated 4 ಜೂನ್ 2021, 13:21 IST
 ಮೂಡುಬಿದಿರೆಯಲ್ಲಿ ಶುಕ್ರವಾರ ನಡೆದ ಕಾರ್ಯಪಡೆ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು
 ಮೂಡುಬಿದಿರೆಯಲ್ಲಿ ಶುಕ್ರವಾರ ನಡೆದ ಕಾರ್ಯಪಡೆ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು   

ಮೂಡುಬಿದಿರೆ: ‘ಹಳ್ಳಿಗಳಲ್ಲಿ ಸಕ್ರಿಯವಾಗಿರುವ ಕೋವಿಡ್ ನಿಯಂತ್ರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಿ, ಮೂಡುಬಿದಿರೆಯನ್ನು ಕೋವಿಡ್‌ ಮುಕ್ತವನ್ನಾಗಿಸುವಲ್ಲಿ ಎಲ್ಲರೂ ಶ್ರಮಿಸಬೇಕು’ ಎಂದು ಶಾಸಕ ಹಾಗೂ ಮೂಡುಬಿದಿರೆ ತಾಲ್ಲೂಕು ಕಾರ್ಯಪಡೆ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.

ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಕೋವಿಡ್ 19ರ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು. ‘ಹೋಂ ಐಸೊಲೇಷನ್‌ನಲ್ಲಿ ಇರುವವರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಟ್ಟುಕೊಳ್ಳಿ. ಅವರು ಪೂರ್ತಿ ಗುಣಮುಖವಾಗುವವರೆಗೆ ನಿಗಾ ಇಡಬೇಕು’ ಎಂದು ಸೂಚಿಸಿದರು.

ಗ್ರಾಮವಾರು ಕೋವಿಡ್ ಸೋಂಕಿತರ ವಿವರಗಳನ್ನು ಶಾಸಕರು ಗ್ರಾಮಲೆಕ್ಕಿಗರ ಮೂಲಕ ಪಡೆದುಕೊಂಡರು. ಸಭೆಗೆ ಬರುವಾಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆದ ಅಂಕಿ–ಅಂಶವನ್ನು ನೀಡುವುದರ ಬದಲು ನೀವು ಸಂಗ್ರಹಿಸಿದ ಅಂಕಿ–ಅಂಶವನ್ನು ನೀಡುವಂತೆ ಶಾಸಕರು ಗ್ರಾಮ ಲೆಕ್ಕಿಗರಿಗೆ ಸೂಚಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ದಯಾವತಿ ಮಾತನಾಡಿ, ‘ಮೂಡುಬಿದಿರೆ ತಾಲ್ಲೂಕಿನಲ್ಲಿ 447 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದರೆ 258 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಪಡಕೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾದ ಮಾಹಿತಿ ಇಲ್ಲ. ಒಂದು ಡೋಸ್‌ನಿಂದ ಎರಡನೇ ಡೋಸ್ ಪಡೆಕೊಳ್ಳುವ ಮಧ್ಯೆ ಇರಬೇಕಾದ ಅವಧಿಯ ಬಗ್ಗೆಯು ಗೊಂದಲ ಇದೆ’ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ‘ಇದು ಆರೋಗ್ಯ ಇಲಾಖೆಯ ನಿರ್ದೇಶನದಂತೆ ನಡೆಯುತ್ತದೆ, ಗೊಂದಲ ಬೇಡ’ ಎಂದರು.

ಗ್ರಾಮ ಮಟ್ಟದಲ್ಲಿ ನಡೆಯುವ ಕಾರ್ಯಪಡೆ ಸಭೆಗೆ ಪೊಲೀಸರು ಹಾಜರಾಗುತ್ತಿಲ್ಲ ಎಂಬ ದೂರಿಗೆ ನಮಗೆ ಮಾಹಿತಿ ಇದ್ದರೆ ಸ್ಥಳೀಯ ಬೀಟ್ ಪೊಲೀಸರನ್ನು ಸಭೆಗೆ ಕಳಿಸುತ್ತೇವೆ ಎಂದು ಸಬ್ ಇನ್‌ಸ್ಪೆಕ್ಟರ್ ಸುದೀಪ್ ತಿಳಿಸಿದರು.

ತಹಶೀಲ್ದಾರ್ ಪುಟ್ಟರಾಜು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.