ADVERTISEMENT

ಮಂಗಳೂರು: ಆರು ಮಂದಿ ವಿಮಾನ ಪ್ರಯಾಣ ರದ್ದು

ಕೋವಿಡ್‌ ವಾರ್ ಆ್ಯಪ್‌ನಲ್ಲಿ ದಾಖಲಾಗದ ವರದಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 4:14 IST
Last Updated 5 ನವೆಂಬರ್ 2020, 4:14 IST

ಮಂಗಳೂರು: ಕೋವಿಡ್–19 ನೆಗೆಟಿವ್ ಪ್ರಮಾಣಪತ್ರಗಳ ನಿಖರತೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಶ್ನಿಸಿದ್ದರಿಂದ, ಇಲ್ಲಿಂದ ದುಬೈಗೆ ತೆರಳಬೇಕಿದ್ದ 6 ಮಂದಿ ಭಟ್ಕಳದ ನಿವಾಸಿಗಳ ಪ್ರಯಾಣ ರದ್ದಾಗಿದೆ.

ದುಬೈನಲ್ಲಿ ಕೆಲಸಕ್ಕೆ ತೆರಳಲು ಕೋವಿಡ್–19 ನೆಗೆಟಿವ್ ಪ್ರಮಾಣಪತ್ರದೊಂದಿಗೆ ಇದೇ 1 ರಂದು ನಗರದ ವಿಮಾನ ನಿಲ್ದಾಣಕ್ಕೆ ಭಟ್ಕಳದ ಆರು ಜನರು ಬಂದಿದ್ದರು. ಆದರೆ, ಅವರ ಕೋವಿಡ್–19 ಪರೀಕ್ಷಾ ವರದಿ ಕೋವಿಡ್‌ ವಾರ್ ಆ್ಯಪ್‌ನಲ್ಲಿ ದಾಖಲಾಗದೇ ಇರುವುದರಿಂದ, ಈ ಪ್ರಮಾಣಪತ್ರಗಳು ಅಧಿಕೃತವಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅವರಿಗೆ ಪ್ರಯಾಣ ಬೆಳೆಸಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

ಕೋವಿಡ್–19 ನೆಗೆಟಿವ್ ಪ್ರಮಾಣಪತ್ರ ಇದ್ದವರಿಗೆ ಮಾತ್ರ ದುಬೈಗೆ ಮರಳಲು ಅಲ್ಲಿನ ಆಡಳಿತ ಅವಕಾಶ ನೀಡಿದೆ. ಅಲ್ಲದೇ ದುಬೈ ತಲುಪಿದ ನಂತರ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ADVERTISEMENT

‘ಇದರಲ್ಲಿ ನಮ್ಮ ತಪ್ಪಿಲ್ಲ. ಅಧಿಕೃತ ಪ್ರಮಾಣಪತ್ರದೊಂದಿಗೆ ನಾವು ವಿಮಾನ ನಿಲ್ದಾಣಕ್ಕೆ ಬಂದಿದ್ದೇವು. ಆದರೆ, ಅಧಿಕಾರಿಗಳು ನಮಗೆ ವಿಮಾನ ಏರಲು ಅವಕಾಶ ನೀಡಲಿಲ್ಲ. ವಿಮಾನದ ಟಿಕೆಟ್‌ಗಾಗಿ ₹9 ಸಾವಿರ ಖರ್ಚು ಮಾಡಿದ್ದೇವೆ’ ಎಂದು ದುಬೈಗೆ ತೆರಳುತ್ತಿದ್ದ ಭಟ್ಕಳದ ಇಸ್ಮಾಯಿಲ್‌ ನಗರ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹರಿಸಲಾಗಿದ್ದು, ಐಸಿಎಂಆರ್‌ ಪೋರ್ಟಲ್‌ನ ಮಾಹಿತಿಯನ್ನೇ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಎಂದು ಪರಿಗಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.