ADVERTISEMENT

ಮಂಗಳೂರು: ಹಿಟ್‌ ಅಂಡ್‌ ರನ್, ಯುವಕ ಸಾವು

ಸೋಮೇಶ್ವರ ಪುರಸಭೆ ವ್ಯವಸ್ಥಾಪಕ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 11:54 IST
Last Updated 11 ಜುಲೈ 2020, 11:54 IST
ಸುಬೇದ್‌
ಸುಬೇದ್‌   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಮೇಲೆ ಶನಿವಾರ ಮಧ್ಯಾಹ್ನ ಸೋಮೇಶ್ವರ ಪುರಸಭೆಯ ವ್ಯವಸ್ಥಾಪಕನ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಉಳ್ಳಾಲ ಬಂಡಿಕೊಟ್ಯ ನಿವಾಸಿ ಸುಬೇದ್‌ (28) ಮೃತ ಯುವಕ. ಸ್ಕೂಟರ್‌ನಲ್ಲಿ ಹಿಂಬದಿ ಸವಾರನಾಗಿದ್ದ ಚೆಂಬುಗುಡ್ಡೆ ನಿವಾಸಿ ಮಹಮ್ಮದ್‌ ಶಾಕೀರ್‌ (18) ತೀವ್ರವಾಗಿ ಗಾಯಗೊಂಡಿದ್ದಾನೆ. ಕಾರನ್ನು ಸ್ಕೂಟರ್‌ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಸೋಮೇಶ್ವರ ಪುರಸಭೆ ವ್ಯವಸ್ಥಾಪಕ ಕೃಷ್ಣ ಮತ್ತು ಮೃತ ಯುವಕನ ದೇಹದ ಮೇಲೆ ಹರಿದ ಲಾರಿಯ ಚಾಲಕ ಕಾರ್ಕಳದ ಸುರೇಂದ್ರ ಎಂಬುವವರನ್ನು ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಬೇದ್‌ ಮತ್ತು ಮಹಮ್ಮದ್‌ ಶಾಕೀರ್‌ ಮಧ್ಯಾಹ್ನ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಸೇತುವೆ ಮೇಲೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೃಷ್ಣ ಅವರ ಹುಂಡೈ ಐ20 ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸುಬೇದ್‌ ಮತ್ತು ಶಾಕೀರ್‌ ಸ್ಕೂಟರ್‌ನೊಂದಿಗೆ ರಸ್ತೆಗೆ ಬಿದ್ದಿದ್ದಾರೆ. ಕೇರಳದ ಕಡೆಗೆ ಸಿಮೆಂಟ್‌ ಸಾಗಿಸುತ್ತಿದ್ದ ಲಾರಿ ಸುಬೇದ್‌ ಮೇಲೆ ಚಲಿಸಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆಸಿದ್ದ ಕೃಷ್ಣ, ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಬೆನ್ನಟ್ಟಿ ಹೋದ ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು, ತೊಕ್ಕೊಟ್ಟು ಓವರ್‌ ಬ್ರಿಡ್ಜ್‌ ಬಳಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕನನ್ನೂ ವಶಕ್ಕೆ ಪಡೆಯಲಾಗಿದೆ. ಮೃತ ಸುಬೇದ್‌ನ ವಿವಾಹ ಜುಲೈ 23ಕ್ಕೆ ನಿಗದಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.