
ಉಳ್ಳಾಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿಯ ಸಂಬಂಧ ದೇಶದಾದ್ಯಂತ 80 ಸಾವಿರ ಸ್ಥಳಗಳಲ್ಲಿ ಹಿಂದೂಗಳು ರಾಷ್ಟ್ರ, ಧರ್ಮ, ಸಂಸ್ಕೃತಿ ಹಾಗೂ ಸಮಾಜದಲ್ಲಿ ನಮ್ಮ ಕರ್ತವ್ಯ ಏನೆಂದು ಚಿಂತನೆ ನಡೆಸಲು ಒಟ್ಟು ಸೇರುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಸಹ-ವ್ಯವಸ್ಥಾ ಪ್ರಮುಖ್ ಸ್ವಾಮಿ ಪ್ರಸಾದ್ ಮಂಗಳೂರು ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ, ಉಳ್ಳಾಲ ತಾಲ್ಲೂಕು ವತಿಯಿಂದ ಕುತ್ತಾರಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದ ಪೆರ್ಮನ್ನೂರ್ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದು ಸಂಘವನ್ನು ವಿಜೃಂಭಿಸಿ ಮಾತನಾಡುವ ಭಾಷಣದ ಕಾರ್ಯಕ್ರಮವಲ್ಲ. ಹಿಂದೂವಾಗಿ ಧರ್ಮದ ಉಳಿವಿಗೆ ನಾವೇನು ಮಾಡಬೇಕೆಂಬುದರ ಬಗ್ಗೆ ತಿಳಿಯುವ ಕಾರ್ಯಕ್ರಮವಾಗಿದೆ. ಯಾರನ್ನೂ ಇಲ್ಲಿಂದ ಓಡಿಸಿ ಹಿಂದೂ ರಾಷ್ಟ್ರವನ್ನು ಕಟ್ಟುವುದು ನಮ್ಮ ಸಂಸ್ಕೃತಿಯಲ್ಲ. ಎಲ್ಲರನ್ನೂ ಒಟ್ಟು ಸೇರಿಸಿ ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯುವುದೇ ನಮ್ಮ ಹಿಂದೂ ಸಂಸ್ಕೃತಿಯಾಗಿದೆ ಎಂದು ಹೇಳಿದರು.
ಮಾಡೂರು ಮರಿಯಾಣಪಾಲು ಶಿವಗಿರಿ ಶಿವ ದುರ್ಗಾಂಬ ಮಠದ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಹಿರಿಯ ದೈವ ನರ್ತಕರಾದ ಮಾಯಿಲ ಕುತ್ತಾರು ಅವರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಿತು.
ಹಿಂದೂ ಸಂಗಮ ಆಯೋಜನಾ ಸಮಿತಿಯ ಮಹಿಳಾ ಪ್ರಮುಖ್ ಗಾಯತ್ರಿ ಕಿಶೋರ್ ಮಾತನಾಡಿದರು.
ಕಾಪಿಕಾಡು ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ಕುಮಾರ್ ಯು.ಕೆ. ಅಧ್ಯಕ್ಷತೆ ವಹಿಸಿದ್ದರು. ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಉಪಾಧ್ಯಕ್ಷ ಜಗದೀಶ ಸಾಲಿಯಾನ್, ಸುರೇಶ್ ಆಚಾರ್ಯ ದೇರಳಕಟ್ಟೆ, ಜೀವನ್ ಕುಮಾರ್ ತೊಕ್ಕೊಟ್ಟು, ಪ್ರದೀಪ್ ಕೆರೆಬೈಲ್ ಭಾಘವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.