ಸೈಬರ್ ವಂಚನೆ
ಮಂಗಳೂರು: ದೇಣಿಗೆ ನೀಡುವ ನೆಪದಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ₹ 26 ಸಾವಿರ ವಂಚನೆ ನಡೆಸಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಜೂನ್ 6ರಂದು ರಾತ್ರಿ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಮಾತನಾಡಿದ ವ್ಯಕ್ತಿ ತನ್ನನ್ನು ಯೆಯ್ಯಾಡಿಯಲ್ಲಿ ಬಾಲಾಜಿ ಟ್ರಾನ್ಸ್ಪೋರ್ಟ್ ಸಂಸ್ಥೆಯನ್ನು ನಡೆಸುತ್ತಿರುವ ರಾಹುಲ್ ಎಂದು ಪರಿಚಯಿಸಿಕೊಂಡಿದ್ದ. ಇಸ್ಕಾನ್ ದೇವಸ್ಥಾನಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದ್ದ ಆತ ನನ್ನ ಮೊಬೈಲ್ಗೆ ಸಂಜೆ 7.20 ಗಂಟೆಗೆ ₹ 1 ಕಳುಹಿಸಿದ್ದ. ಬಳಿಕ ಹಣ ವರ್ಗಾವಣೆಯಾದ ಬಗ್ಗೆ ಸಂದೇಶ ಕಳುಹಿಸಿದ್ದ. ನಿಮಗೆ ₹ 3 ಸಾವಿರದ ಬದಲು ತಪ್ಪಿ ₹ 30ಸಾವಿರ ಹಣ ವರ್ಗಾವಣೆಯಾಗಿದೆ. ಅದರಲ್ಲಿ₹ 26 ಸಾವಿರವನ್ನು ಮರಳಿಸುವಂತೆ ತಿಳಿಸಿದ. ಆತನ ಮಾತನ್ನು ನಂಬಿ, ಆತ ಹೇಳಿದ ಖಾತೆಗೆ ₹ 26ಸಾವಿರವನ್ನು ಪಾವತಿಸಿದ್ದೆ. ಬಳಿಕ ಮತ್ತೆ ಕರೆ ಮಾಡಿದ ಆರೋಪಿ ಮತ್ತೆ ₹ 40 ಸಾವಿರ ಹಣ ವರ್ಗಾವಣೆ ಆಗಿದ್ದು, ಅದನ್ನೂ ಮರಳಿಸುವಂತೆ ಕೊರಿದ್ದ. ಆರೋಪಿ ರಾಹುಲ್ನ ಗೂಗಲ್ ಪೇ ಖಾತೆಯಲ್ಲಿ ಸಂಜಯ್ ಕುಮಾರ್ ಎಂದು ಬರೆದಿತ್ತು. ಆರೋಪಿ ರಾಹುಲ್ ಅಲಿಯಾಸ್ ಸಂಜಯ್ ಕುಮಾರ್ ಹಣ ವರ್ಗಾವಣೆಯಾದ ಬಗ್ಗೆ ಸುಳ್ಳು ಸಂದೇಶ ಕಳುಹಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.