
ಉಡುಪಿಯ ಮುನಿಯಾಳದ ರೈತರೊಬ್ಬರ ಹಟ್ಟಿ
ಮಂಗಳೂರು: ಕಾರ್ಕಳ ಸಮೀಪ ಮಿಯಾರಿನ ಗಣೇಶ್ ಶೆಟ್ಟಿ ಅವರದು ಕೃಷಿಕ ಕುಟುಂಬ. ಹಸುಗಳನ್ನೂ ಸಾಕುತ್ತಿದ್ದರು. ಆದರೆ ಈಚೆಗೆ ಮೂರು ವರ್ಷಗಳ ಹಿಂದೆ ನಷ್ಟ ಅನುಭವಿಸಿದ ಕಾರಣ ಹಸು ಸಾಕಣೆ ನಿಲ್ಲಿಸಿದರು. ಆದರೂ ಅದರ ಕಡೆಗಿನ ಸೆಳೆತವಿತ್ತು. ಹಾಗಾಗಿ ನಂತರ ಹಟ್ಟಿ ಸಕ್ರಿಯವಾಯಿತು. ಜೆರ್ಸಿ ಹಸುಗಳ ಹಾಲು ಕರೆದು ಡೇರಿಗೆ ಕೊಡುವುದು ಮುಂದುವರಿಯಿತು. ಈ ನಡುವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಲುತ್ಪಾದಕರ ಒಕ್ಕೂಟ ತಮಿಳುನಾಡಿನ ಈರೋಡ್ನಿಂದ ಹಸುಗಳನ್ನು ತರಿಸುವ ಯೋಜನೆ ಕೈಗೊಂಡಿರುವುದು ಗಮನಕ್ಕೆ ಬಂತು. ಈರೋಡ್ಗೆ ಹೋಗಿ ಎಚ್.ಎಫ್, ಜರ್ಮನ್ ಮುಂತಾದ ತಳಿಗಳ 30 ಹಸುಗಳನ್ನು ತಂದರು. ಊರ ತಳಿಯ ಐದು ಹಸುಗಳೂ ಇವೆ. ವಾಸದ ಮನೆಯಿಂದ ದೂರದಲ್ಲಿ ಪ್ರತ್ಯೇಕವಾಗಿರುವ ತೋಟದ ನಡುವಿನ ಹಟ್ಟಿ ಈಗ ಸಕ್ರಿಯವಾಗಿದೆ. ಹಸುಗಳ ಆರೈಕೆ, ತಿನಿಸು ನೀಡುವುದು, ಸೆಗಣಿ ತೆಗೆಯುವುದು, ಗಂಜಲವನ್ನು ತೋಟಕ್ಕೆ ಬಿಡುವುದು ...ಹೀಗೆ ದಿನಿವಿಡೀ ಕೆಲಸ. ಹೊರಗಿನಿಂದ ಬರುವ ಮೂರ್ನಾಲ್ಕು ಮಂದಿಗೆ ನಿತ್ಯ ಉದ್ಯೋಗ, ಒಕ್ಕೂಟಕ್ಕೆ ಹಾಲು.
ಬೆಳ್ತಂಗಡಿ ತಾಲ್ಲೂಕು ಗೇರುಕಟ್ಟೆ ಸಮೀಪದ ಪಿಲಿಗೂಡು ಇಬ್ರಾಹಿಂ ವೃತ್ತಿ ಜೊತೆಯಲ್ಲಿ ಹಸು ಸಾಕಣೆಯನ್ನು ಪ್ರವೃತ್ತಿಯಾಗಿ ಇರಿಸಿಕೊಂಡಿದ್ದರು ಅದು ಕೂಡ ಈಗ ವೃತ್ತಿಯಾಗಿದೆ. 17 ವರ್ಷಗಳಿಂದ ಹಸು ಸಾಕುತ್ತಿರುವ ಅವರು ಸ್ಥಳೀಯ ತಳಿಗಳ ಜೊತೆಯಲ್ಲಿ ಈರೋಡ್, ಮೈಸೂರು ಕಡೆಯಿಂದ ತಂದ ತಳಿಗಳನ್ನೂ ಸಾಕುತ್ತಿ ದ್ದಾರೆ. ಇಬ್ಬರು ಕೆಲಸದವರೊಂದಿಗೆ 40 ಹಸು ಸಾಕಿ ಒಕ್ಕೂಟಕ್ಕೆ ಹಾಲು ಒದಗಿಸುತ್ತಿ
ದ್ದಾರೆ. ಒಕ್ಕೂಟದ ನಿರ್ದೇಶಕರೂ ಆಗಿರುವ ಪ್ರಕಾಶ್ಚಂದ್ರ ಶೆಟ್ಟಿ ಹೈನುಗಾರಿಕೆಯನ್ನೇ ಉದ್ಯೋಗ ಮಾಡಿ ಕೊಂಡಿದ್ದು ಹೊಸ ಸಾಧ್ಯತೆಗಳ ಹುಡು ಕಾಟದಲ್ಲಿ ಒಕ್ಕೂಟದ ಜೊತೆ ನಿಂತಿದ್ದಾರೆ.
ಇಂಥ ಯಶಸ್ಸಿನ ಕಥೆಗಳ ಜೊತೆಯಲ್ಲಿ ಹಸು ಸಾಕುವುದು ಅಧ್ವಾನವೆಂದುಕೊಂಡು ವಿಮುಖರಾಗುತ್ತಿರುವವರೂ ಇದ್ದಾರೆ. ಕರಾವಳಿ ಭಾಗದಲ್ಲಿ ಹಸುಗಳನ್ನು ನಿಭಾಯಿಸುವುದು ಎಷ್ಟು ತ್ರಾಸದಾಯಕ ಕೆಲಸ ಎಂಬುದನ್ನು ವಿವರಿಸಲು ಅವರಲ್ಲಿ ಸೋಲಿನ ಮತ್ತು ನಷ್ಟದ ಕಥೆಗಳು ಬಹಳಷ್ಟು ಇವೆ. ಹೊಸಬರ ಪ್ರವೇಶವಂತೂ ಈ ಕ್ಷೇತ್ರದಲ್ಲಿ ತೀರಾ ಅಪರೂಪ.
ಇಂಥ ಸಂದಿಗ್ಧ ಪರಿಸ್ಥಿತಿಯನ್ನು ನಿಭಾ ಯಿಸುವ ಸವಾಲಿನೊಂದಿಗೆ ಉಡುಪಿ–ದಕ್ಷಿಣ ಕನ್ನಡ ಒಕ್ಕೂಟ ಪ್ರಯೋಗಗಳ ಬೆನ್ನು ಬಿದ್ದಿದೆ. ಈರೋಡ್ನಿಂದ ಹಸು ತರುವ, ಉತ್ತರ ಕರ್ನಾಟಕ, ಹಾಸನ ಭಾಗದಿಂದ ಸೈಲೇಜ್ ತಂದು ವಿತರಿಸುವ ಮತ್ತು ಪ್ರೋತ್ಸಾಹ ಧನ, ಸಾಲಸೌಲಭ್ಯ, ರಿಯಾಯಿತಿ, ವಿನಾಯಿತಿಗಳನ್ನು ನೀಡುವ ಮೂಲಕ ಹಸು ಸಾಕಾಣಿಕೆಗೆ ಚೇತರಿಕೆ ತುಂಬುವ ಕಾರ್ಯ ನಡೆದಿದೆ.
ಮೇವು ಕೊರತೆ, ನಿರ್ಬಂಧಗಳು: ಸಾಂಪ್ರದಾಯಿಕವಾಗಿ ಹಸು ಸಾಕುವ ಮನೆತನಗಳಲ್ಲಿ ಈಗಲೂ ಒಂದೆರಡು ಹಸುಗಳು ಇವೆ. ಇವರ ಪೈಕಿ ಹಲವರಿಗೆ ಇದನ್ನು ವಿಸ್ತರಿಸಿ ನಿತ್ಯಜೀವನಕ್ಕೆ ಬೇಕಾದ ಸಂಪಾದನೆ ಮಾಡಬೇಕು ಎಂಬ ಆಸೆ–ಆಸಕ್ತಿ ಇದೆ. ಆದರೆ 'ಕೊರತೆ'ಗಳು ಅವರನ್ನು ಆ ಸಾಹಸದಿಂದ ದೂರ ಇರುವಂತೆ ಮಾಡಿವೆ. ಮೇವು ಸಾಕಷ್ಟು ಇಲ್ಲದಿರುವುದು, ಪೇಟೆಯಲ್ಲಿ ಸಿಕ್ಕುವ ಪಶು ಆಹಾರದಿಂದ ಹಾಲುತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು, ಹಾಲಿನ ಸಾಗಾಟದ ವೆಚ್ಚ, ರೋಗಗಳ ಕಾಟ, ಆರೈಕೆಗೆ ಹೆಚ್ಚು ಸಮಯ ತಗಲುವುದು ಹೀಗೆ ಸಣ್ಣ ಪ್ರಮಾಣದ, ಸಾಮಾನ್ಯ ರೈತರಿಗೆ ಹೇಳಿಕೊಳ್ಳಲು ಸಮಸ್ಯೆಯ ಪಟ್ಟಿ ದೊಡ್ಡದಿದೆ. ಆದರೂ ಹಸು ಸಾಕಣೆ ಅಥವಾ ಹೈನುಗಾರಿಕೆಯನ್ನು ಪ್ರವೃತ್ತಿಯಾಗಿ, ಹವ್ಯಾಸವಾಗಿ ಇರಿಸಿಕೊಳ್ಳುವುದಕ್ಕಿಂತ ವೃತ್ತಿಯಾಗಿ, ಉದ್ಯೋಗವಾಗಿ ಪರಿಗಣಿಸಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಇದು ಲಾಭದಾಯಕ ಮತ್ತು ಆಹ್ಲಾದಕರ ಎಂಬುದು ಬಹುತೇಕ ರೈತರ ಅಂಬೋಣ.
'ಈರೋಡ್ನಿಂದ ತರುವ ಹಸುಗಳೂ ಉತ್ತಮ ಪ್ರಮಾಣದಲ್ಲಿ ಹಾಲು ನೀಡುತ್ತವೆ. ಅಲ್ಲಿನ ಸಂತೆಗೆ ಹೋಗಿ ಖರೀದಿಸುವ ಹಸುಗಳಿಗೆ ₹ 1 ಲಕ್ಷ 20 ಸಾವಿರದ ಆಸುಪಾಸಿನಲ್ಲಿ ಬೆಲೆ ಇದೆ. ಇದಲ್ಲದೆ ಅಲ್ಲಿನ ಹಳ್ಳಿಗಳ ಡೇರಿಗಳಲ್ಲೂ ಖರೀದಿಗೆ ಸಿಗುತ್ತವೆ. ಪ್ರತಿ ಹಸುವಿನ ಸಾಗಾಟಕ್ಕೆ ಹಾಲು ಒಕ್ಕೂಟ ₹ 5 ಸಾವಿರ ನೀಡುತ್ತದೆ. ಜೊತೆಯಾಗಿ ತೆಗೆದುಕೊಂಡು ಬಂದರೆ ಸಾಗಾಟ ವೆಚ್ಚವನ್ನು ಸಾಧ್ಯವಾದಷ್ಟು ಉಳಿಸಬಹುದು. ಹಸುಗಳನ್ನು ತರುವಾಗಲೇ ಒಕ್ಕೂಟದ ಕಡೆಯಿಂದ ವಿಮೆ ಸೌಲಭ್ಯ ಸಿದ್ಧವಾಗಿರುತ್ತದೆ. ಆದ್ದರಿಂದ ದಾರಿಯಲ್ಲಿ ಏನಾದರೂ ಸಂಭವಿಸಿದರೆ ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಆತಂಕ ಇರುವುದಿಲ್ಲ’ ಎಂದು ಗಣೇಶ್ ಶೆಟ್ಟಿ ಮಿಯಾರು ಹೇಳುತ್ತಾರೆ.
'ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಬೇಕಾದರೆ ಸರಿಯಾದ ಯೋಜನೆಗಳು ಬೇಕು. ಹಾಗೆ ಮಾಡಿದರೆ ಹಸುಗಳು ನಿಜವಾಗಿಯೂ ಕಾಮಧೇನು ಗಳಾಗುತ್ತವೆ. ಅದರ ಉಪ ಉತ್ಪನ್ನಗಳು ಈಗ ಬೆಲೆ ಕಟ್ಟಲಾಗದ ವಸ್ತು ಗಳಾಗಿವೆ. ಒಂದು ಬುಟ್ಟಿ ಸೆಗಣಿಗೆ ₹ 80ರಷ್ಟು ಬೆಲೆ ಇದೆ. ಕನಿಷ್ಠ ₹ 50 ಸಿಕ್ಕಿಯೇ ಸಿಗುತ್ತದೆ. ಒಂದು ಲೀಟರ್ ಗಂಜಲಕ್ಕೆ ₹ 3 ಇದೆ. ಇದನ್ನೆಲ್ಲ ಮಾರಾಟ ಮಾಡಲು ಮನಸ್ಸಿಲ್ಲದಿದ್ದರೆ ತೋಟಕ್ಕೆ ಹಾಕಬಹುದು. ನಿರೀಕ್ಷೆಗೂ ಮೀರಿದ ಇಳುವರಿ ಸಿಗುತ್ತದೆ. ಹಾಲು ಸಾಗಾಟದ ವಾಹನಕ್ಕೆ ಈಗ ತಿಂಗಳಿಗೆ ₹9 ಸಾವಿರ
ಬಾಡಿಗೆ ಕೊಡುತ್ತಿದ್ದೇವೆ. ಕೆಲವೇ ದಿನ ಗಳಲ್ಲಿ ಸ್ವಂತ ವಾಹನ ಬರಲಿದೆ. ಆಗ ಈ ಹಣವೂ ಉಳಿ ತಾಯ ಆಗಲಿದೆ' ಎನ್ನುತ್ತಾರೆ ಗಣೇಶ್.
ದೂರದೃಷ್ಟಿಯ ಯೋಚನೆ ಯೋಜನೆ ಬೇಕು
ಸಾಂಪ್ರದಾಯಿಕವಾಗಿ ಹಸು ಸಾಕುತ್ತಿದ್ದ ಕೆಲವು ಸಮು ದಾಯಗಳು ಅದರಿಂದ ದೂರ ಸರಿಯುತ್ತಿವೆ. ಯುವ ಸಮು ದಾಯದ ಪೈಕಿ ಬಹುತೇಕರು ಇತ್ತ ಸುಳಿಯುವುದಿಲ್ಲ. ಇದರ ಬಗ್ಗೆ ಚಿಂತನೆ ಆಗಬೇಕಿದೆ. ದುರದೃಷ್ಟಿಯ ಯೋಜನೆಗಳು ಸಿದ್ಧವಾಗಿಬೇಕಾಗಿದೆ. ಯಂತ್ರಗಳು ಮತ್ತು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಾಗಿದರೆ ಒಕ್ಕೂಟದಲ್ಲಿ ಇನ್ನೂ ಒಂದೆರಡು ಲಕ್ಷ ಲೀಟರ್ ಹಾಲು ಹೆಚ್ಚು ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ನಿರ್ದೇಶಕ ಸುಚರಿತ ಶೆಟ್ಟಿ.
ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಯಲ್ಲಿ ಮೇವು ಕಡಿಮೆ ಕೊಟ್ಟು ಪಶು ಆಹಾರವನ್ನು ಹೆಚ್ಚು ನೀಡುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮೇವು ಮತ್ತು ಆಹಾರವನ್ನು ಜೊತೆಯಾಗಿ ನೀಡಬೇಕೇ ಹೊರತು ಮೇವಿಗೆ ಬದಲು ಪಶು ಆಹಾರ ಎಂದು ತಿಳಿದುಕೊಳ್ಳಬಾರರು. ಅದರಿಂದ ಆರೋಗ್ಯ ಹದಗೆಟ್ಟು ಹಾಲುತ್ಪಾದನೆ ಕಡಿಮೆಯಾಗುತ್ತದೆ. ಈಗ ಸೈಲೇಜ್ ಕೊಡುವುದರಿಂದ ತುಂಬ ಅನುಕೂಲ ಆಗುತ್ತಿದೆ. ಅದಕ್ಕೆ ಬೆಲೆಯೂ ಕಡಿಮೆ. ಒಂದು ಕೆಜಿ ಹುಲ್ಲಿನ ಬದಲು ಎರಡು ಕೆಜಿ ಸೈಲೇಜ್ ಖರೀದಿಸಬಹುದು. ಇದರಿಂದ ಪಶು ಆಹಾರದ ಮೊರೆ ಹೋಗುವುದೂ ಕಡಿಮೆಯಾಗುತ್ತದೆ. ಸೈಲೇಜ್ ನೀಡುವುದರಿಂದ ಮತ್ತು ಕೊಟ್ಟಿಗೆ ನಿರ್ವಹಣೆಗೆ ಹೊಸ ತಂತ್ರಗಳನ್ನು ಅಳವಡಿಸುವುದರಿಂದ ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣ ಹೆಚ್ಚಾಗಿದೆ.-ಪ್ರಕಾಶ್ಚಂದ್ರ ಶೆಟ್ಟಿ, ಹಾಲು ಒಕ್ಕೂಟದ ನಿರ್ದೇಶಕ
ಈರೋಡ್ನಿಂದ ತರುವ ಹಸುಗಳಿಗೆ ಇಲ್ಲಿನ ವಾತಾವರಣ ಚೆನ್ನಾಗಿ ಒಗ್ಗುತ್ತದೆ. ಸೈಲೇಜ್ ಸಾಕಷ್ಟು ಸಿಗುವುದರಿಂದ ಆಹಾರದ ಸಮಸ್ಯೆಯೂ ಇಲ್ಲ. ಸೈಲೇಜ್ ಆ ಹಸುಗಳಿಗೆ ಚೆನ್ನಾಗಿ ನಾಟುತ್ತದೆ. ಹೊಸಬ ಹೈನುಗಾರಿಕೆಗೆ ಬರುವುದಾದರೆ ಡೇರಿ ತೆರೆಯುವಷ್ಟು ಅನುಕೂಲ ಮಾಡಿಕೊಡಲಾಗುತ್ತದೆ. ಡಿಸಿಸಿ ಬ್ಯಾಂಕ್ನಿಂದ ಕಡಿಮೆ ಬಡ್ಡಿ ಅಥವಾ ಬಡ್ಡಿ ರಹಿತ ಸಾಲ ನೀಡುತ್ತಾರೆ. ನಮ್ಮಲ್ಲಿ ಇಷ್ಟಪಟ್ಟು ಕಷ್ಟಪಡುವವರ ಕೊರತೆ ಇರುವುದೇ ದೊಡ್ಡ ಸಮಸ್ಯೆ. ಅದನ್ನು ಬಿಟ್ಟರೆ ಎಲ್ಲವೂ ಸುಲಲಿತ ಆಗುತ್ತದೆ.-ರವಿರಾಜ್ ಹೆಗ್ಡೆ , ಒಕ್ಕೂಟದ ಅಧ್ಯಕ್ಷ
ಗ್ವಾವಾ ಲಸ್ಸಿ ಮತ್ತು ಸೀಡ್ ಡಿಲೈಟ್ ಗಳು ಹೊಸದಾಗಿ ಬಂದಿವೆ. 80 ಸಾವಿರ ಲೀಟರ್ ಹಾಲು ಈಚಿನ 10 ವರ್ಷಗಳಲ್ಲಿ ಹೆಚ್ಚಾಗಿದೆ. ಒಟ್ಟು 21 ಉತ್ಪನ್ನಗಳು ಇವೆ. ರೈತರು ಹೆಚ್ಚಾಗಿ ಬರುತ್ತಿದ್ದಾರೆ. ಹಸುಗಳ ಸಂಖ್ಯೆ ಹೆಚ್ಚಾಗಿದೆ. 25 ಯೋಜನೆಗಳು ಇವೆ. ಅವುಗಳನ್ನು ಬಳಸಿಕೊಂಡು ಯುವಕರು ಕೂಡ ಡೇರಿ ತೆರೆಯಲು ಮುಂದೆ ಬಂದಿದ್ದಾರೆ.-ರವಿರಾಜ್ ಉಡುಪ, ಪಿ ಆ್ಯಂಡ್ ಐ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.