ಬಂಟ್ವಾಳ: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದ್ದು, ನ್ಯಾಯಯುತ ಹೋರಾಟ ಮುಂದುವರಿಸಲು ಹೋರಾಟ ಸಮಿತಿ ಸಿದ್ದಗೊಂಡಿದೆ ಎಂದು ಸಮಿತಿ ಅಧ್ಯಕ್ಷ, ವಕೀಲ ಎಚ್.ವಿ.ರಾಘವೇಂದ್ರ ಹೇಳಿದರು.
ಇಲ್ಲಿನ ಬಿ. ಸಿ.ರೋಡಿನಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಗುರುವಾರ ನಡೆದ ಹೋರಾಟ ಸಮಿತಿ ಸಮಾಲೋಚನಾ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಈಗಾಗಲೇ ಹೈಕೋರ್ಟ್ ನಾಲ್ಕು ಪೀಠಗಳಿದ್ದು, ಕರ್ನಾಟಕದಲ್ಲೂ ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾಗಬೇಕು ಎಂಬುದು ನಮ್ಮ ಆಗ್ರಹ. ಬೆಂಗಳೂರು ಹೈಕೋರ್ಟ್ ಕೇಸ್ಗಳಲ್ಲಿ ಶೇ 40ರಷ್ಟು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರಿಗೆ ಸಂಬಂಧಿಸಿದವುಗಳಾಗಿವೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಯಿಂದ ಹಲವು ಉದ್ಯೋಗಾವಕಾಶದ ಜತೆಗೆ ಕಡಿಮೆ ವೆಚ್ಚದಲ್ಲಿ ತ್ವರಿತ ನ್ಯಾಯ ಸಿಗಲಿದೆ ಎಂದರು.
ಅವಿಭಜಿತ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ವಕೀಲರಾಗಿದ್ದು, ಯು.ಟಿ. ಖಾದರ್, ಹರೀಶ್ ಪೂಂಜ, ಪ್ರತಾಪ್ ಸಿಂಹ ನಾಯಕ್, ಐವನ್ ಡಿಸೋಜ ಹಾಗೂ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಎಲ್ಲಾ ಜನಪ್ರತಿನಿಧಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು.
ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಿಚರ್ಡ್ ಎಂ.ಡಿಕೋಸ್ತಾ, ಉಪಾಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ವಸಂತ ಮರಕಡ, ಜಗನ್ನಾಥ ರೈ ಜಿ., ಹರೀಶ್ ಪಿ., ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಜೊತೆ ಕಾರ್ಯದರ್ಶಿ ನವೀನ್ ಬಿ.ಕೆ., ಕೋಶಾಧಿಕಾರಿ ಜೆಸಿಂತಾ ಕ್ರಾಸ್ತಾ, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.