ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಡಿ ನಿರ್ಮಿಸಿದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ತುಳು ಸಿನಿಮಾ ‘ಧರ್ಮ ಚಾವಡಿ’ ಇದೇ 11 ರಂದು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಎಲ್ಲಾ ಸಿನಿಮ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಿನಿಮಾ ನಿರ್ದೇಶಕ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಇದು ನನ್ನ ಎರಡನೇ ಚಿತ್ರ. ಇದರ ಟೀಸರ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಸಿನಿಮಾ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು. ಆದರೆ ಟೀಸರ್ ಬೇರೆಯೇ ರೀತಿಯಲ್ಲಿರುವುದರಿಂದ ಅವರ ಕುತೂಹಲ ಹೆಚ್ಚಾಗಿದೆ. ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಶೋ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.
ಸಿನಿಮಾಕ್ಕೆ ಪ್ರಸಾದ್ ಕೆ. ಶೆಟ್ಟಿ ಸಂಗೀತ, ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣವಿದೆ. ರಜಾಕ್ ಪುತ್ತೂರು ಚಿತ್ರಕಥೆ ಬರೆದಿದ್ದಾರೆ. ರಮೇಶ್ ರೈ ಕುಕ್ಕುವಳ್ಳಿ, ರವಿ ಸ್ನೇಹಿತ್ , ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಧರ್ಮ ನಗರ, ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ, ರಂಜನ್ ಬೋಳೂರು, ಮನೀಶ್ ಶೆಟ್ಟಿ ಸಿದ್ದಕಟ್ಟೆ, ರಕ್ಷಣ್ ಮಾಡೂರು, ರೂಪ ಡಿ ಶೆಟ್ಟಿ ಸವಿತಾ ಅಂಚನ್, ನೇಹಾ ಕೋಟ್ಯಾನ್, ನಿಶ್ಮಿತಾ ಶೆಟ್ಟಿ ನಟಿಸಿದ್ದಾರೆ. ಸಚಿನ್ ಉಪ್ಪಿನಂಗಡಿ ಚಿತ್ರದ ವಿತರಣೆ ಹಕ್ಕು ಪಡೆದಿದ್ದಾರೆ’ ಎಂದರು.
ನಟಿ ಧನ್ಯಾ ಪೂಜಾರಿ ‘ಧರ್ಮ ಚಾವಡಿ ನನ್ನ ಮೊದಲ ಚಿತ್ರ. ನಿರೀಕ್ಷೆಗಿಂತ ಸಿನಿಮಾ ಚೆನ್ನಾಗಿದೆ. ಸಿನಿಮಾ ನೋಡಿ ಗೆಲ್ಲಿಸಿ’ ಎಂದರು. ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ನಡುಬೈಲ್ ಜಗದೀಶ್ ಅಮೀನ್, ನಟ ರಮೇಶ್ ರೈ ಕುಕ್ಕುವಳ್ಳಿ, ಸಂಗೀತ ನಿರ್ದೇಶಕ ಪ್ರಸಾದ್ ಕೆ. ಶೆಟ್ಟಿ, ಅರುಣ್ ರೈ ಪುತ್ತೂರು, ನೇಹಾ ಕೋಟ್ಯಾನ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.