ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿರುವ ಹೆದ್ದಾರಿ ಪಕ್ಕದ ಕಾಡಿಗೆ ಎಸ್ಐಟಿ ತಂಡವು ಸಾಕ್ಷಿ ದೂರುದಾರನನ್ನು ಕರೆದೊಯ್ಯಿತು.
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್ಐಟಿ) ಮಂಗಳವಾರ ಶೋಧ ಕಾರ್ಯ ಆರಂಭಿಸಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿರುವ ಹೆದ್ದಾರಿ ಪಕ್ಕದ ಕಾಡಿಗೆ ಎಸ್ಐಟಿ ತಂಡವು ಸಾಕ್ಷಿ ದೂರುದಾರನನ್ನು ಕರೆದೊಯ್ಯಿತು.
ಎಸ್ಐಟಿ ಜೊತೆಗೆ ಸುಮಾರು 20 ಕಾರ್ಮಿಕರು ಶೋಧ ಕಾರ್ಯಕ್ಕೆ ಕಾಡಿನೊಳಗೆ ತೆರಳಿದ್ದಾರೆ. ಅಗೆಯುವ ಯಂತ್ರವನ್ನೂ ಸ್ಥಳಕ್ಕೆ ತರಲಾಗಿದೆ.
ಈ ಪ್ರಕರಣದ (ಸಂಖ್ಯೆ 39/2025) ಸಾಕ್ಷಿ ದೂರುದಾರ ವ್ಯಕ್ತಿ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿಯ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು, ವಿಧಿವಿಜ್ಞಾನ ತಂಡದ ತಜ್ಞರು ಕಾಡಿನೊಳಗೆ ತೆರಳಿದ್ದಾರೆ.
ಪ್ರಕರಣದ ಸಾಕ್ಷಿ ದೂರುದಾರ 13 ಜಾಗಗಳನ್ನು ತೋರಿಸಿದ್ದ. ಅವುಗಳಲ್ಲಿ 10 ಜಾಗಗಳಲ್ಲಿ ಸೋಮವಾರದವರೆಗೆ ಶೋಧ ಕಾರ್ಯ ನಡೆದಿದೆ. ಸೋಮವಾರ ಆತ ತೋರಿಸಿದ್ದ 11ನೇ ಜಾಗದದಿಂದ ಸುಮಾರು 100 ಮೀ ದೂರದಲ್ಲಿ ನೆಲದ ಮೇಲೆಯೆ ಮೃತದೇಹದ ಅವಶೇಷ ಸಿಕ್ಕಿತ್ತು. ದೂರುದಾರ ತೋರಿಸಿದ್ದ 11ನೇ ಜಾಗವನ್ನು ಮಂಗಳವಾರ ಅಗೆಯಲಾಗುತ್ತಿದೆ. ಈ ಜಾಗವು ಹೆದ್ದಾರಿಯಿಂದ ಸುಮಾರು 20 ಮೀ ದೂರದಲ್ಲಿ ಕಾಡಿನೊಳಗೆ ಇದೆ.
ಗುರುವಾರ ನೇತ್ರಾವದಿ ನದಿ ಪಕ್ಕದ ಕಾಡಿನಲ್ಲಿ ಆರನೇ ಜಾಗದಲ್ಲಿ ಅಗೆದಾಗ ಪುರುಷನ ಮೃತದೇಹ ಸಿಕ್ಕಿತ್ತು. ಉಳಿದ ಒಂಬತ್ತು ಜಾಗಗಳಲ್ಲಿ ಅಗೆದಾಗ ಮೃತದೇಹದ ಯಾವುದೇ ಕುರುಹುಗಳು ಸಿಕ್ಕಿಲ್ಲ.
ಶೋಧ ಕಾರ್ಯದ ದೃಶ್ಯಗಳು ಹೊರಗಡೆ ಕಾಣಬಾರದೆಂದು ರಸ್ತೆ ಪಕ್ಕದಲ್ಲಿ ಉದ್ದಕ್ಕೂ ಹಸಿರು ಬಣ್ಣದ ಪರದೆ ಕಟ್ಟಲಾಗಿದೆ.
ಮಂಗಳವಾರ ಅಗೆದ ಜಾಗದಲ್ಲಿ ಮಧ್ಯಾಹ್ನದವರೆಗೆ ಮೃತದೇಹದ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.