ADVERTISEMENT

ಮೂಲ್ಕಿಯಲ್ಲಿ ಜಿಲ್ಲಾಧಿಕಾರಿ ಜನತಾ ದರ್ಶನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:47 IST
Last Updated 30 ಅಕ್ಟೋಬರ್ 2023, 16:47 IST
ಮೂಲ್ಕಿಯಲ್ಲಿ ನಡೆದ ಜಿಲ್ಲಾಧಿಕಾರಿ ಜನತಾ ದರ್ಶನದಲ್ಲಿ ಮುಲ್ಲೈ ಮುಗಿಲನ್‌ ನಾಗರಿಕರ ಸಮಸ್ಯೆ ಆಲಿಸಿದರು
ಮೂಲ್ಕಿಯಲ್ಲಿ ನಡೆದ ಜಿಲ್ಲಾಧಿಕಾರಿ ಜನತಾ ದರ್ಶನದಲ್ಲಿ ಮುಲ್ಲೈ ಮುಗಿಲನ್‌ ನಾಗರಿಕರ ಸಮಸ್ಯೆ ಆಲಿಸಿದರು   

ಮೂಲ್ಕಿ: ಇಲ್ಲಿನ ಬಂಟರ ಸಂಘದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಅಹವಾಲು ಸಲ್ಲಿಸಿದರು.

ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮಗಿಲನ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜನರ ಸಮಸ್ಯೆ ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ ಗಂಭೀರ ಸಮಸ್ಯೆಗಳನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ತಹಶೀಲ್ದಾರ್‌ಗೆ ಆದೇಶಿಸಿದರು. ಜಟಿಲವಾದ ಸಮಸ್ಯೆಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಗೆ ಬರುವಂತೆ ತಿಳಿಸಿದರು.

ಕಡವಿನ ಬಾಗಿಲು ಪ್ರದೇಶದಲ್ಲಿ ಮೊಬೈಲ್ ಟವರ್, ಮೂಡಾದಿಂದ ರಸ್ತೆ ವಿಸ್ತರಣೆಯ ಅನಧಿಕೃತ ಆದೇಶ, ಕೇಂದ್ರ ಸರ್ಕಾರದ ಯೋಜನೆಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಹಂಪ್‌ ಅಳವಡಿಕೆ, ಕಿನ್ನಿಗೋಳಿಯಲ್ಲಿ ವಾರದ ಸಂತೆಯಂದು ಸಂಚಾರ ಅವ್ಯವಸ್ಥೆ, ಮೂಲ್ಕಿಯಲ್ಲಿ ಒಳ ಚರಂಡಿ ಸಮಸ್ಯೆ,  ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆಯ ಅವ್ಯವಸ್ಥೆ, ಮೂಲ್ಕಿ ಗ್ರಂಥಾಲಯ ಬದಲಾವಣೆ, ಐಕಳದಲ್ಲಿ ಹಂದಿ ಸಾಕಾಣಿಕೆ ಕೇಂದ್ರದ ಅಕ್ರಮ, ಮಾನಂಪಾಡಿ, ಹಳೆಯಂಗಡಿ, ಮೂಲ್ಕಿಯಲ್ಲಿ ನೀರಿನ ಸಮಸ್ಯೆ, ಚಿತ್ರಾಪು ನದಿ ಪ್ರದೇಶದಲ್ಲಿ ಅಪಾಯ, ಪಡಿತರ ಅಕ್ಕಿಯಲ್ಲಿ ಸಂಶಯ, ಹಕ್ಕು ಪತ್ರ, ರಸ್ತೆ ಅವ್ಯವಸ್ಥೆ ಬಗ್ಗೆ ಸಾರ್ಬಜನಿಕರು ಅಹವಾಲು ಸಲ್ಲಿಸಿದರು.

ADVERTISEMENT

ಅಧಿಕಾರಿಗಳಾದ ಅಭಿಷೇಕ್, ಮಾಣಿಕ್ಯ, ಹರ್ಷವರ್ಧನ, ಮೂಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್‌, ತಾಲ್ಲೂಕು ಪಂಚಾಯಿತಿಯ ಶಾಂತಪ್ಪ ಇದ್ದರು.

ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಭೇಟಿ ಎಂದು ಸಮಯ ನಿಗದಿಯಾಗಿತ್ತು. ಮಂಗಳೂರಿನಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿ ಮೂಲ್ಕಿಗೆ ಬರುವಾಗ ಸುಮಾರು 11.30 ಆಗಿತ್ತು. ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟನೆಯನ್ನು ಔಪಚಾರಿಕವಾಗಿ ಮುಗಿಸಿ ಭಾಷಣಕ್ಕೆ ಅವಕಾಶ ಬೇಡ. ಜನರ ಸಮಸ್ಯೆ ಆಲಿಸೋಣ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಸಮ್ಮತಿಸಿದರು.

ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಐಕಳದಲ್ಲಿ ಪರವಾನಗಿ ಇಲ್ಲದೆ ನಡೆಸುತ್ತಿರುವ ಹಂದಿ ಸಾಕಾಣಿಕೆ ಕೇಂದ್ರವನ್ನು ಕೂಡಲೇ ಮುಚ್ಚಬೇಕು. ಕಿನ್ನಿಗೋಳಿಯಲ್ಲಿನ ಸಂಚಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಪ್ಲಾಸ್ಟಿಕ್ ಬ್ಯಾನರ್ ಬಳಸಿದ್ದ ಬಗ್ಗೆ ನಾಗರಿಕರೊಬ್ಬರು ಗಮನ ಸೆಳೆದಿದ್ದರಿಂದ ಅಧಿಕಾರಿಗಳಿಂದ ಕ್ಷಮೆ ಕೇಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.