ಮೂಡುಬಿದಿರೆ: ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ತೋಡಾರು ಪರಿಸರದ ಅಯ್ಯಪ್ಪ ವ್ರತಧಾರಿಗಳ ಜತೆಗೆ ಶ್ವಾನವೊಂದು ಸುಮಾರು 400 ಕಿ.ಮೀ. ಹಿಂಬಾಲಿಸಿ ಬಂದು ಮಂಗಳವಾರ ಮೂಡುಬಿದಿರೆ ತಲುಪಿದ್ದು ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.
ಅಯ್ಯಪ್ಪ ವ್ರತಧಾರಿಗಳು ರಾಜೇಶ್ ಗುರುಸ್ವಾಮಿ ನೇತೃತ್ವದಲ್ಲಿ ಅಕ್ಟೋಬರ್ 30ರಂದು ತಿರುಪತಿ ತಿರುಮಲದಿಂದ ಪಾದಯಾತ್ರೆ ಹೊರಟಿದ್ದರು. ಚಿಕ್ಕಮಗಳೂರು ಮಾರ್ಗವಾಗಿ ಹುಟ್ಟೂರು ಮೂಡುಬಿದಿರೆಗೆ ಹೊರಟ ಈ ತಂಡದ ಜತೆ ತಿರುಪತಿಯಿಂದ ಶ್ವಾನವೊಂದು ಹಿಂಬಾಲಿಸಿಕೊಂಡು ಬಂದಿದೆ. ಮಂಗಳವಾರ ವ್ರತಧಾರಿಗಳು ಮೂಡುಬಿದಿರೆಯ ಮಣಿಕಂಠ ಕ್ಷೇತ್ರಕ್ಕೆ ಆಗಮಿಸಿದಾಗ ಕ್ಷೇತ್ರದ ಪ್ರಮುಖರಾದ ರಮೇಶ್ ಶಾಂತಿ ಮತ್ತು ಕ್ಷೇತ್ರದ ಪ್ರಮುಖ ಸುದರ್ಶನ್ ಎಂ ಬರಮಾಡಿಕೊಂಡರು. ಅಲ್ಲಿಂದ ತೋಡಾರಿಗೆ ಹೊರಟಿದ್ದು ಶ್ವಾನ ಅವರ ಜತೆ ಹೆಜ್ಜೆ ಹಾಕಿದೆ.
ವ್ರತಧಾರಿ ರಾಜೇಶ್ ಮಾತನಾಡಿ ‘ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಕುರಿತ ಸಂಕಲ್ಪದಿಂದ ವ್ರತಧಾರಿಗಳು ಅಯೋಧ್ಯೆ ಹಾಗೂ ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.