
ಮೂಡುಬಿದಿರೆ: ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 440 ಕೆ.ವಿ ವಿದ್ಯುತ್ ಲೈನ್ ಕಾಮಗಾರಿ ಸಂಬಂಧ ತೆಂಕಮಿಜಾರು ಗ್ರಾಮದಲ್ಲಿ ಕೃಷಿ ಭೂಮಿ ಹಾನಿಗೊಳಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಕಂಪನಿ ನೋಟಿಸ್ ನೀಡದೆ ತೆಂಕಮಿಜಾರು ಗ್ರಾಮದ ಕೃಷಿ ಭೂಮಿಗೆ ಪ್ರವೇಶಿಸಿ ಕಾಮಗಾರಿ ನಡೆಸಿ ಅಡಿಕೆ ಕೃಷಿಯನ್ನು ಹಾನಿಗೊಳಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಖಂಡಿಸಿ, ಗ್ರಾಮಸ್ಥರು ಹಾಗೂ ಭಾರತೀಯ ಕಿಸಾನ್ ಸಂಘದ ಸದಸ್ಯರು ಸಂತ್ರಸ್ತ ಕೃಷಿಕ ಭಾಸ್ಕರ್ ಶೆಟ್ಟಿ ಅವರ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಮುಖಂಡ ಶಾಂತಿಪ್ರಸಾದ್ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ವಿದ್ಯುತ್ ಕಾಮಗಾರಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ನೆಪದಲ್ಲಿ ರೈತರ ಕೃಷಿ ಭೂಮಿಗೆ ಹಾನಿಗೊಳಿಸಿ, ಕೃಷಿ ಉತ್ಪನ್ನಗಳಿಗೆ ನಷ್ಟ ಉಂಟು ಮಾಡಲಾಗುತ್ತಿದೆ. ಸ್ಟೆರ್ಲೈನ್ ಕಂಪನಿಯ ವಿದ್ಯುತ್ ಲೈನ್ ಕಾಮಗಾರಿ ಹಾದು ಹೋಗುವ 9 ಗ್ರಾಮಗಳ ಕೃಷಿಕರಿಗೆ ತೊಂದರೆ ಆಗಲಿದೆ. ಕೃಷಿಕರಾದ ಭಾಸ್ಕರ್ ಶೆಟ್ಟಿ, ಸಂಜೀವ ಗೌಡ, ರಾಜೇಶ್ ಭಂಡಾರಿ, ಮಿಜಾರುಗುತ್ತು ಪ್ರವೀಣ್ ರೈ, ಜಾನ್ ರೆಬೆಲ್ಲೊ, ಜೆಸಿಂತಾ ಮೊದಲಾದವರು ಕಂಪನಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ಸಂತ್ರಸ್ತ ರೈತರಿಗೆ ಕಂಪನಿ ಪರಿಹಾರ ನೀಡಿಲ್ಲ. ರೈತ ವಿರೋಧಿ ನೀತಿಯನ್ನು ಸರ್ಕಾರ ಕೈಬಿಡದಿದ್ದರೆ ಶೀಘ್ರದಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಸಂತ್ರಸ್ತ ಕೃಷಿಕ ಭಾಸ್ಕರ್ ಶೆಟ್ಟಿ ಮಾತನಾಡಿ, ‘ಕಂಪನಿಯು ಪೊಲೀಸರನ್ನು ಬಳಸಿಕೊಂಡು ನಮ್ಮ ಭೂಮಿಯನ್ನು ಬಲವಂತದಿಂದ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.
ತೆಂಕಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಸದಸ್ಯ ವಿದ್ಯಾನಂದ ಮಿಜಾರು, ದೋಟ ಸುರೇಶ್ ಶೆಟ್ಟಿ, ಪ್ರಮುಖರಾದ ವಸಂತ್ ಭಟ್, ಇರುವೈಲು ದೊಡ್ಡಗುತ್ತು ದಿನೇಶ್ ಶೆಟ್ಟಿ, ಜಾನ್ ರೆಬೆಲ್ಲೊ, ಜೆಸಿಂತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.