ADVERTISEMENT

ಮಂಗಳೂರು | ಅಡ್ಯಾರ್ ಐಸ್ ಕ್ರೀಮ್ ಘಟಕದಲ್ಲಿ ಬೆಂಕಿ:  ₹ 4 ಕೋಟಿ ನಷ್ಟ 

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 8:02 IST
Last Updated 28 ಮಾರ್ಚ್ 2023, 8:02 IST
   

ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಐಸ್ ಕ್ರೀಮ್ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

ಘಟಕದಲ್ಲಿ ದಾಸ್ತಾನಿದ್ದ ₹1 ಕೋಟಿಗೂ ಅಧಿಕ ಮೌಲ್ಯದ ಐಸ್ ಕ್ರೀಮ್, 3 ಶೈತ್ಯಾಗಾರಗಳು ಹಾಗೂ ಶೈತ್ಯಾಗಾರ ಘಟಕ ಅಳವಡಿಸಿದ್ದ ಒಂದು ವಾಹನವು ಬೆಂಕಿಗಾಹುತಿಯಾಗಿದೆ.

ಈ ಬೆಂಕಿ ಅವಘಡದಿಂದ ಸುಮಾರು ₹ 4 ಕೋಟಿಗಳಷ್ಟು ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಐಸ್ಕ್ರೀಮ್ ಘಟಕದ ಸಿಬ್ಬಂದಿಯೊಬ್ಬರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ADVERTISEMENT

'ಕಾಸರಗೋಡಿನಿಂದ ಕಾರವಾರದವರೆಗೆ ಕರಾವಳಿ ಜಿಲ್ಲೆಯ ವಿತರಕರಿಗೆ ಈ ಘಟಕದ ಮೂಲಕವೇ ಕೆಎಂಎಫ್ ನಂದಿನಿ ಬ್ರಾಂಡ್ ನ ಐಸ್ ಕ್ರೀಮ್ ಅನ್ನು ತಲುಪಿಸಲಾಗುತ್ತಿತ್ತು. ಐಸ್ ಕ್ರೀಂ ತಿನ್ನಲು ಬಳಸುವ ಚಮಚಗಳನ್ನೂ ಈ ಘಟಕದಲ್ಲೇ ತಯಾರಿಸಲಾಗುತ್ತಿತ್ತು. 18 ವರ್ಷಗಳಿಂದ ಈ ಘಟಕವು ಕಾರ್ಯಾಚರಿಸುತ್ತಿದೆ' ಎಂದು ಅವರು ತಿಳಿಸಿದರು.

'ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಮಧ್ಯರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಘಟಕದಲ್ಲಿದ್ದ ಬಹುತೇಕ ವಸ್ತುಗಳು ಅಷ್ಟರಲ್ಲಿ ಸುಟ್ಟು ಕರಕಲಾಗಿದ್ದವು' ಎಂದು ಘಟಕದ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.