ADVERTISEMENT

ತಪಸ್ಸಿನಂತೆ ಯಕ್ಷಕಲಾ ಸೇವೆ ಮಾಡಿದ ಬೈಪಾಡಿತ್ತಾಯ ದಂಪತಿ: ಎಂ.ಎಲ್ ಸಾಮಗ

ಅಲಂಗಾರಿನಲ್ಲಿ ಶ್ರೀಹರಿ ಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 9:18 IST
Last Updated 9 ನವೆಂಬರ್ 2021, 9:18 IST
ಶ್ರೀಹರಿ ಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ
ಶ್ರೀಹರಿ ಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ   

ಮೂಡುಬಿದಿರೆ: ‘ಬೈಪಾಡಿತ್ತಾಯ ದಂಪತಿ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ನೀಡಿ ತಪಸ್ಸಿನಂತೆ ಯಕ್ಷಕಲಾ ಸೇವೆ ಮಾಡಿದವರು. ಅವರ ಶಿಷ್ಯರು ಯಾವುದೇ ರಂಗದಲ್ಲಿ ಮುಂದುವರಿದರೂ ಯಕ್ಷಗಾನದ ಕುರಿತಾದ ಆಸಕ್ತಿ, ಪ್ರೀತಿ ಮತ್ತು ಶ್ರಮವನ್ನು ಮುಂದುವರಿಸಿಕೊಂಡು ಈ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು’ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್ ಸಾಮಗ ಹೇಳಿದರು.

ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಯಕ್ಷಗಾನಕ್ಕೆ ಬದುಕು ಮುಡಿಪಾಗಿಟ್ಟಿರುವ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ದಂಪತಿಯ ಅಮೃತ ಮಹೋತ್ಸವದ ಅಂಗವಾಗಿ, ಅವರ ಶಿಷ್ಯವೃಂದ ಮತ್ತು ಅಭಿಮಾನಿಗಳು ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮ ‘ಶ್ರೀಹರಿ ಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ’ನಲ್ಲಿ ಅವರು ಮಾತನಾಡಿದರು.

ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ ಭಟ್ ಅಭಿನಂದನಾ ನುಡಿಗಳನ್ನು ಆಡಿದರು. ‘ಲೀಲಾವತಿ ಬೈಪಾಡಿತ್ತಾಯ ಅವರು ಸುದೀರ್ಘ ಕಾಲ ವೃತ್ತಿಪರ ಮೇಳಗಳಲ್ಲಿ ಭಾಗವತರಾಗಿ ತಿರುಗಾಟ ನಡೆಸಿರುವುದು ದಾಖಲೆಯಾದರೆ, ಪತಿ, ಪತ್ನಿ ಇಬ್ಬರೂ ಯಕ್ಷಗಾನ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವುದು ಮತ್ತೊಂದು ದಾಖಲೆ’ ಎಂದರು. ಸನ್ಮಾನಿತರ ಪರವಾಗಿ ಅವರ ಪುತ್ರ, ಪತ್ರಕರ್ತ ಅವಿನಾಶ್ ಬೈಪಾಡಿತ್ತಾಯ ಮಾತನಾಡಿ, ’ಪ್ರಶಸ್ತಿಗಿಂತ ಶಿಷ್ಯರು, ಅಭಿಮಾನಿಗಳು ನೀಡುವ ಸನ್ಮಾನ, ಗೌರವ ಅತ್ಯಂತ ಹಿರಿದಾದುದು’ ಎಂದರು. ‌

ADVERTISEMENT

ಕಟೀಲು ಕ್ಞೇತ್ರದ ಅರ್ಚಕ ಹರಿದಾಸ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಟಿ. ಶ್ಯಾಮ್ ಭಟ್, ಪಂಚಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ, ಉದ್ಯಮಿ ಕೆ.ಶ್ರೀಪತಿ ಭಟ್ ಇದ್ದರು.

ವಾದಿರಾಜ ಕಲ್ಲೂರಾಯ ಮತ್ತು ಗುರುಪ್ರಸಾದ್ ಬೊಳಿಂಜಡ್ಕ ಸನ್ಮಾನ ಪತ್ರಗಳನ್ನು ವಾಚಿಸಿದರು. ಸಮಿತಿ ಅಧ್ಯಕ್ಷ ಚಂದ್ರಶೇಖರ್ ಭಟ್ ಕೊಂಕಣಾಜೆ ಸ್ವಾಗತಿಸಿದರು. ಅರ್ಥಧಾರಿ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಸಾಯಿಸುಮ ನಾವಡ ವಂದಿಸಿದರು.

ಲಕ್ಷ್ಮೀಶ ಅಮ್ಮಣ್ಣಾಯಗೆ ಶ್ರೀಹರಿಲೀಲಾ ಪ್ರಶಸ್ತಿ

ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ ಶ್ರೀಹರಿಲೀಲಾ-ಯಕ್ಷನಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ದೇವಾನಂದ ಭಟ್ ಬೆಳುವಾಯಿ ಅಭಿನಂದನಾ ನುಡಿಗಳನ್ನಾಡಿದರು. ‘ಶ್ರೀಹರಿಲೀಲಾ-75 ಯಕ್ಷಗಾನ ಕಲಾಯಾನ’ ಅಭಿನಂದನಾ ಗ್ರಂಥ ಹಾಗೂ ‘ಯಕ್ಷಗಾನ ಲೀಲಾವಳಿ’ ಆತ್ಮಕಥನವನ್ನು ಬಿಡುಗಡೆಗೊಳಿಸಲಾಯಿತು. ಬೈಪಾಡಿತ್ತಾಯ ಶಿಷ್ಯವೃಂದದ ಪರವಾಗಿ ಚಂದ್ರಶೇಖರ ಭಟ್ ಕೊಂಕಣಾಜೆ ಹಾಗೂ ವಿದ್ಯಾ ಕೋಳ್ಯೂರು ಅಭಿನಂದನಾ ನುಡಿಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.