ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಇದ್ದೂ ಇಲ್ಲದಂತಿದ್ದಾರೆ. ಔಷಧಿ ಕೊಡುವ ಬದಲು ಹೊರಗಡೆಯಿಂದ ತೆಗೆದುಕೊಳ್ಳುವಂತೆ ಚೀಟಿ ಕೊಡುತ್ತಾರೆ, ಗರ್ಭಿಣಿಯರು ಬಂದರೆ ವಿಚಾರಿಸುವವರೂ ಇಲ್ಲ. ಅವ್ಯವಸ್ಥೆ ಬಗೆಹರಿಸದೆ ಇದ್ದರೆ ಸಂಘಟಿತರಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆ ಶುಕ್ರವಾರ ನಡೆದ ಉಪ್ಪಿನಂಗಡಿ ಗ್ರಾಮ ಸಭೆಯಲ್ಲಿ ವ್ಯಕ್ತವಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಕೋರಿಕೆಯಂತೆ ಇಲ್ಲಿನ ಅವ್ಯವಸ್ಥೆ ವಿರುದ್ಧ ಮೇಲಧಿಕಾರಿಗಳಿಗೆ ತಿಳಿಸಿ, ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಹಿರಿಯ ಆರೋಗ್ಯ ಸಹಾಯಕಿ ಮರಿಯಮ್ಮ ಅವರು ಇಲಾಖೆಯ ಮಾಹಿತಿ ನೀಡುತ್ತಿದ್ದಂತೆ ಆಕ್ರೋಶಿತರಾದ ಗ್ರಾಮಸ್ಥರು, ಇಲ್ಲಿ ಎಲ್ಲವನ್ನೂ ಹೇಳುತ್ತೀರಿ, ಬಡವರು ಆಸ್ಪತ್ರೆಗೆ ಬಂದರೆ ಕೇಳುವವರೇ ಇಲ್ಲ. ವ್ಐದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆ ಮಾಡಿ ಚೀಟಿ ಕೊಡುತ್ತಾರೆ. ಔಷಧಿ ವಿಭಾಗಕ್ಕೆ ಹೋದರೆ, ಇಲ್ಲಿ ಇಲ್ಲ ಹೊರಗಡೆಯಿಂದ ತೆಗೆದುಕೊಳ್ಳಿ ಎನ್ನುತ್ತೀರಿ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.
‘ಇಲ್ಲಿನ ವೈದ್ಯಾಧಿಕಾರಿ ಖಾಸಗಿ ಕ್ಲಿನಿಕ್ನಲ್ಲಿ ಇರುತ್ತಾರೆ. ಅಲ್ಲಿಗೆ ಬರುವ ರೋಗಿಗಳಿಗೆ ಔಷಧಿ ನೀಡಿ ಅವರನ್ನು ಆಸ್ಪತ್ರೆಗೆ ಕಳುಹಿಸಿ ಅಲ್ಲಿ ವಿಶ್ರಾಂತಿಗೆ ತಿಳಿಸುತ್ತಾರೆ. ಆಸ್ಪತ್ರೆಯಲ್ಲಿ ಇದ್ದ ವೇಳೆ ಇಲ್ಲಿಗೆ ಬರುವ ಬಹಳಷ್ಟು ರೋಗಿಗಳಿಗೆ ಔಷಧಿ ಕೊಟ್ಟು ಮುಂದೆ ಕ್ಲಿನಿಕ್ಗೆ ಬರಲು ಹೇಳುತ್ತಾರೆ. ಅದೇ ರೀತಿ ಇವರು ಇಲ್ಲದ ವೇಳೆ ಯಾರಾದರು ರೋಗಿಗಳು ಬಂದರೆ ಅವರು ಕ್ಲಿನಿಕ್ನಲ್ಲಿ ಇರುತ್ತಾರೆ ಎಂದು ಅಲ್ಲಿ ಕಳುಹಿಸುತ್ತಾರೆ’ ಎಂದು ಸಭೆಯಲ್ಲಿ ಆರೋಪ ಕೇಳಿ ಬಂದಿತು.
ಸಭೆಯ ನಿಯಂತ್ರಣಾಧಿಕಾರಿ ಲೋಕೇಶ್ ಮಾತನಾಡಿ, ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಆರೋಗ್ಯ ರಕ್ಷಾ ಸಮಿತಿಯಲ್ಲೂ ಚರ್ಚೆಯಾಗಿದೆ. ಈ ವಿಚಾರವನ್ನು ಆಸ್ಪತ್ರೆಯಿಂದ ಸಭೆಗೆ ಬಂದಿರುವ ನೀವು ಅವರ ಗಮನಕ್ಕೆ ತರಬೇಕು. ಆದರೂ ಇಲ್ಲಿ ಈ ಬಗ್ಗೆ ನಿರ್ಣಯ ಬರೆದುಕೊಳ್ಳಲಾಗುವುದು’ ಎಂದರು.
ನಿರ್ಣಯ ಬರೆದು ಆರೋಗ್ಯ ಸಚಿವರಿಗೆ, ಜಿಲ್ಲಾಧಿಕಾರಿಗೆ, ಜಿಲ್ಲಾ ಆರೋಗ್ಯಾಧಿಕಾರಿಗೆ ಕಳುಹಿಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು.
ತ್ಯಾಜ್ಯ ಘಟಕ ಮಾಡುವುದಕ್ಕೆ ಆಕ್ಷೇಪವಿದೆ: 5ನೇ ವಾರ್ಡ್ನಲ್ಲಿ ತ್ಯಾಜ್ಯ ಘಟಕ ನಿರ್ಮಾಣದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ 5ನೇ ವಾರ್ಡ್ನಲ್ಲಿ ತ್ಯಾಜ್ಯ ಘಟಕ ನಿರ್ಮಿಸಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಂತ ಸ್ವಚ್ಛವಾಗಿರುವ ಪ್ರದೇಶ 5ನೇ ವಾರ್ಡ್, ಇಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ. ವಾರ್ಡ್ ಪಕ್ಕದಲ್ಲೇ ಕಾಡು ಇದೆ. ತ್ಯಾಜ್ಯ ಘಟಕ ಮಾಡಿದರೆ ಅಲ್ಲಿನ ಪ್ರಾಣಿಗಳು ಬಂದು ಊರ ಒಳಗೆ ಬರುತ್ತವೆ. ಈ ಕಾರಣದಿಂದ ತ್ಯಾಜ್ಯ ಘಟಕ ನಿರ್ಮಿಸಬಾರದು ಎಂದು ಸ್ಥಳೀಯರು ತಾಕೀತು ಮಾಡಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಸಹಕಾರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಸಂಘ ಸಂಸ್ಥೆ ಪದಾಧಿಕಾರಿಗಳಾದ ಲಕ್ಷ್ಮಣ ಗೌಡ, ಧರ್ಣಪ್ಪ ನಾಯ್ಕ್, ವೆಂಕಪ್ಪ ಪೂಜಾರಿ, ಆದಂ ಕೊಪ್ಪಳ, ಮಜೀದ್, ಯು.ಟಿ.ಇರ್ಷಾದ್, ಮಹಮ್ಮದ್ ಕೆಂಪಿ, ಲತೀಫ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಸದಸ್ಯರಾದ ಕೆ.ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ.ತೌಸೀಫ್, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಯು.ಕೆ.ಇಬ್ರಾಹಿಂ, ಅಬ್ದುಲ್ ರಶೀದ್, ಉಷಾಚಂದ್ರ ಮುಳಿಯ ಭಾಗವಹಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಗೀತಾ ಶೇಖರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.