ADVERTISEMENT

ಮಂಗಳೂರು: ನಿರೀಕ್ಷೆ ಮೂಡಿಸಿದ ‘ಆಸ್ಪತ್ರೆ ಉನ್ನತೀಕರಣ’

ಸಾಕಾರಗೊಳ್ಳಬಹುದೇ ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕನಸು

ಸಂಧ್ಯಾ ಹೆಗಡೆ
Published 4 ಜನವರಿ 2026, 4:43 IST
Last Updated 4 ಜನವರಿ 2026, 4:43 IST
   

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್‌ ಮಂಡನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಜಿಲ್ಲೆಯ ಬಹುಕಾಲದ ಬೇಡಿಕೆಗಳು ಈ ಬಾರಿಯ ಬಜೆಟ್‌ನಲ್ಲಾದರೂ ಸಾಕಾರಗೊಳ್ಳಬಹುದೆಂಬ ನಿರೀಕ್ಷೆ ಮೂಡಿದೆ. ಅವುಗಳಲ್ಲಿ ಪ್ರಮುಖವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗಲೇ ಬೇಕೆಂಬುದು ಜನರ ಬಲವಾದ ಆಗ್ರಹ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು ಇವೆ. ವೈದ್ಯಕೀಯ ಸೌಲಭ್ಯದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಈವರೆಗೂ ಸ್ಥಾಪನೆಯಾಗಿಲ್ಲ ಎಂಬುದು ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕೊರಗು. ಇದರ ಜೊತೆಗೆ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯೂ ಸ್ಥಾಪನೆಯಾಗಬೇಕೆಂಬುದು ಆಯುರ್ವೇದ ಶಿಕ್ಷಣಾಕಾಂಕ್ಷಿಗಳ ಒತ್ತಾಯ. 

ಬಹುವರ್ಷಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪೂರಕವಾಗಿ 2025–26ನೇ ಸಾಲಿನ ಬಜೆಟ್‌ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು 300 ಹಾಸಿಗೆಯ ಆಸ್ಪತ್ರೆಯಾಗಿ ಉನ್ನತೀಕರಿಸುವ ಯೋಜನೆ ಘೋಷಿಸಲಾಗಿತ್ತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಈ ಬಗ್ಗೆ ವಿಶೇಷ ಮುತುವರ್ಜಿವಹಿಸಿದ್ದು, ಪುತ್ತೂರು ತಾಲ್ಲೂಕು ಬನ್ನೂರಿನಲ್ಲಿ ಇದಕ್ಕೆ 40 ಎಕರೆ ಜಾಗ ಮೀಸಲಿಡಲಾಗಿದೆ. 

ADVERTISEMENT

‘ಬನ್ನೂರಿನಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಸಲು ಆದೇಶವಾಗಿದೆ. 2026–27ರ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಘೋಷಣೆ ಮಾಡುವಂತೆ ಮತ್ತು ಅದಕ್ಕೆ ಸಂಬಂಧಿಸಿ ₹300 ಕೋಟಿ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಾಸಕ ಅಶೋಕ್‌ ಕುಮಾರ್ ರೈ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

₹50 ಕೋಟಿ ಬೇಡಿಕೆ: ಸರ್ಕಾರಿ ಆಯುರ್ವೇದ ಕಾಲೇಜು ನಿರ್ಮಾಣಕ್ಕೆ ಬೇಡಿಕೆ ಇದ್ದು, ಐದು ಎಕರೆ ಜಾಗ ಮೀಸಲಿಡಲಾಗುವುದು. ಇನ್ನು 20 ದಿನಗಳಲ್ಲಿ ಜಾಗ ಅಂತಿಮಗೊಳ್ಳಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಆಯುರ್ವೇದ ಕಾಲೇಜು ಆಸ್ಪತ್ರೆ ಸ್ಥಾಪನೆಯಾಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ₹50 ಕೋಟಿ ಇದಕ್ಕಾಗಿ ಮೀಸಲಿಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ‌

ಆಯುರ್ವೇದ ಕಾಲೇಜು ಯಾಕೆ?: ‘ಜಿಲ್ಲೆಯಲ್ಲಿ 900ಕ್ಕೂ ಅಧಿಕ ಆಯುಷ್ ವೈದ್ಯರು ಕೆ.ಪಿ.ಎಂ.ಇ. ಕಾಯ್ದೆ ಅಡಿಯಲ್ಲಿ ನೋಂದಾಯಿಸಿದ್ದಾರೆ. ಅನೇಕ ಖಾಸಗಿ ಆಯುಷ್ ಆಸ್ಪತ್ರೆಗಳು ಇವೆ. ಕರಾವಳಿ ಭಾಗದಲ್ಲಿ ಜನರು ಕಾಮಾಲೆ, ಸರ್ಪಸುತ್ತು, ಮಧುಮೇಹ, ಸಂಧಿವಾತ, ಪಾರ್ಶ್ವವಾಯು ಇತ್ಯಾದಿ ಕಾಯಿಲೆಗಳಿಗೆ ಆಯುರ್ವೇದ ಔಷಧಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಹೆಚ್ಚಿನವರು ಚಿಕಿತ್ಸೆಗೆ ಕೇರಳ ರಾಜ್ಯವನ್ನು ಅವಲಂಬಿಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಸರ್ಕಾರಿ ಆಯುರ್ವೇದ ಕಾಲೇಜಿನ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಆಯುರ್ವೇದ ಕಲಿಕೆಗೆ ಇಲ್ಲಿ ಸರ್ಕಾರಿ ಕಾಲೇಜು ಆಗಬೇಕು ಎನ್ನುತ್ತಾರೆ ಆಯುಷ್ ಅಧಿಕಾರಿಗಳು. 

‘ಜಿಲ್ಲೆಯಲ್ಲಿ 7 ಆಯುಷ್ ಆರೋಗ್ಯ ಮಂದಿರಗಳು, ಹತ್ತು ಹಾಸಿಗೆಯ ಒಳರೋಗಿಗಳ ಆಸ್ಪತ್ರೆ ಎರಡು, 25 ಹಾಸಿಗೆ ಜಿಲ್ಲಾ ಆಸ್ಪತ್ರೆ, 50 ಹಾಸಿಗೆಯ ವೆನ್ಲಾಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಇವೆ. 2024-25ನೇ ಸಾಲಿನಲ್ಲಿ ಆಯುಷ್ ಇಲಾಖೆಯ ಆಸ್ಪತ್ರೆಗಳಲ್ಲಿ ಸುಮಾರು 1.15 ಲಕ್ಷ ಹೊರ ರೋಗಿಗಳು ಮತ್ತು 1,800 ಒಳ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಲೆಕ್ಕ ಮುಂದಿಡುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.