ADVERTISEMENT

ಮಂಗಳೂರು| ಸ್ಮಾರ್ಟ್ ಸಿಟಿಯಲ್ಲಿ ತ್ಯಾಜ್ಯದ್ದೇ ಕಾರುಬಾರು!

ಗಬ್ಬುನಾರುತ್ತಿರುವ ಗಲ್ಲಿಗಳು, ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾದ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 6:12 IST
Last Updated 25 ಮಾರ್ಚ್ 2023, 6:12 IST
ಪೌರಕಾರ್ಮಿಕರು ಪ್ರತಿಭಟನೆಯಿಂದಾಗಿ ವಿಲೇವಾರಿಯಾಗದೆ ರಾಶಿ ಹಾಕಿರುವ ಕಸದ ಪೊಟ್ಟಣಗಳು
ಪೌರಕಾರ್ಮಿಕರು ಪ್ರತಿಭಟನೆಯಿಂದಾಗಿ ವಿಲೇವಾರಿಯಾಗದೆ ರಾಶಿ ಹಾಕಿರುವ ಕಸದ ಪೊಟ್ಟಣಗಳು   

ಮಂಗಳೂರು: ಸಮಾನ ವೇತನ ಹಾಗೂ ನೇರ ಪಾವತಿಗೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರರು ಧರಣಿ ಆರಂಭಿಸಿ, 12 ದಿನಗಳು ಕಳೆದಿದ್ದು, ನಗರದಲ್ಲಿ ತ್ಯಾಜ್ಯ ವಿಲೇವಾರಿ, ಒಳಚರಂಡಿ ಸಮಸ್ಯೆ ಬಿಗಡಾಯಿಸಿದೆ.

ಮನೆಗಳಿಂದ ಕಸ ಸಂಗ್ರಹಿಸುವ ವಾಹನಗಳು ಸರಿಯಾಗಿ ಬರುತ್ತಿಲ್ಲ, ಅಲ್ಲದೆ ರಸ್ತೆ ಬದಿಯಲ್ಲಿ ಕಸ ತುಂಬಿರುವ ಪೊಟ್ಟಣಗಳು ರಾಶಿ–ರಾಶಿ ಬಿದ್ದು ಚೆಲ್ಲಾಪಿಲ್ಲಿಯಾಗಿವೆ. ಬೀದಿನಾಯಿಗಳು ಇವನ್ನು ಕಚ್ಚಿ ಹರಿದು ಹಾಕಿದ್ದು ಕಸ ಅರ್ಧ ರಸ್ತೆಯನ್ನು ಆವರಿಸಿದೆ. ಕೊಳೆತ ತ್ಯಾಜ್ಯದ ದುರ್ನಾತದಿಂದಾಗಿ ಕೆಲವು ರಸ್ತೆಗಳಲ್ಲಿ ಸಂಚರಿಸಲು ಆಗದ ಸ್ಥಿತಿ ಇದೆ. ಒಳರಸ್ತೆಗಳಲ್ಲಂತೂ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ.

ಕಾಯಂ ಪೌರ ಕಾರ್ಮಿಕರು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಸ ಸಂಗ್ರಹಕ್ಕೆ ಬರುವವರಲ್ಲಿ ಹೆಚ್ಚಿನವರು ಹೊರಗುತ್ತಿಗೆ ನೌಕರರಾಗಿದ್ದರು. ಅವರು ಮುಷ್ಕರದಲ್ಲಿ ಇರುವುದರಿಂದ ಕಾಯಂ ನೌಕರರಿಗೆ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಉಲ್ಬಣಗೊಂಡಿದೆ.

ADVERTISEMENT

ಒಳಚರಂಡಿ ನಿರ್ವಹಣೆ ಮಾಡುವವರು ಮುಷ್ಕರದಲ್ಲಿ ಇರುವುದರಿಂದ ಇವುಗಳ ಸ್ಥಿತಿ ಶೋಚನೀಯವಾಗಿದೆ. ಕೆಲವು ಕಡೆ ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದೆ.

‘ನಾವು ನೇರ ಪಾವತಿ ಮತ್ತು ಸಮಾನ ವೇತನವನ್ನು ಕೇಳುತ್ತಿದ್ದೇವೆ. ತಕ್ಷಣಕ್ಕೆ ಕಾಯಂ ಮಾಡಬೇಕು ಎನ್ನುತ್ತಿಲ್ಲ. ಆ ಪ್ರಕ್ರಿಯೆಯನ್ನು ಹಂತಹಂತವಾಗಿ ಮಾಡಲಿ. ಮಹಾನಗರ ಪಾಲಿಕೆ ನೇರ ಪಾವತಿ ಮಾಡಲು ಸಮಸ್ಯೆ ಏನು ಎಂಬುದು ಅರ್ಥವಾಗುತ್ತಿಲ್ಲ. ನಾವು ಕೆಲಸ ಮಾಡಿದರೆ ಗುತ್ತಿಗೆದಾರರಿಗೆ ಲಾಭವಾಗುತ್ತದೆ. ನಾವು ದುಡಿದ ಪೂರ್ಣ ಹಣವನ್ನು ನಮಗೆ ಕೊಡಲಿ’ ಎಂದು ಜಿಲ್ಲಾ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ನವೀನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.