ಮಂಗಳೂರು: ನಗರದ ತಪಸ್ಯಾ ಫೌಂಡೇಷನ್ ಮಂಗಳೂರು ಬೀಚ್ ಉತ್ಸವದ ಎರಡನೇ ಅವೃತ್ತಿಯ ಅಂಗವಾಗಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ಆಯೋಜಿಸಲಿರುವ ಮಂಗಳೂರು ಟ್ರಯಥ್ಲಾನ್ನ ಮೂರನೇ ಆವೃತ್ತಿಯ ಜೆರ್ಸಿಯನ್ನು ಭಾನುವಾರ ಬಿಡುಗಡೆ ಮಾಡಲಾಯಿತು.
ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ ಅವರು ಜೆರ್ಸಿ ಮತ್ತು ಪದಕಗಳನ್ನು ಬಿಡುಗಡೆ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ಕ್ರೀಡಾಪಟುಗಳಿಗೆ ಚೆಸ್ಟ್ ನಂಬರ್ ವಿತರಿಸಿದರು. ಕಾರ್ಯಕ್ರಮಕ್ಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಪಸ್ಯಾ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಸಬಿತಾ ರಮಾನಂದ ಶೆಟ್ಟಿ, ‘ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗಾಗಿ ನಿರ್ಮಿಸುವ ಕೇಂದ್ರಕ್ಕೆ ನಿಧಿಸಂಗ್ರಹಿಸುವ ಸಲುವಾಗಿ ಬೀಚ್ ಉತ್ಸವ ಮತ್ತು ಟ್ರಯಥ್ಲಾನ್ ಆಯೋಜಿಸಲಾಗುತ್ತಿದೆ’ ಎಂದರು.
ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಜಯಕುಮಾರ್ ಮಾತನಾಡಿ ‘ಮಂಗಳೂರಿನ ಯೆನೆಪೋಯ ಸೇರಿದಂತೆ ಅನೇಕ ಕಡೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಿವೆ. ಆದರೆ ಪ್ಯಾಲಿಯೇಟಿವ್ ಕೇರ್ ಸೆಂಟರ್ ಮಾಡಬೇಕಾದರೆ ಭಾವನಾತ್ಮಕ ಸ್ಪಂದನೆ ಮುಖ್ಯ. ಅದನ್ನು ತಪಸ್ಯಾ ಫೌಂಡೇಷನ್ ಮಾಡುತ್ತಿದೆ. ರೋಗಿ ಭರವಸೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದುದು ಪ್ಯಾಲಿಯೇಟಿವ್ ಕೇರ್ನಲ್ಲಿ ಮುಖ್ಯ. ಆರ್ಥಿಕವಾಗಿಯೂ ದೊಡ್ಡ ಹೊರೆ ಆಗುವ ಈ ಸವಾಲನ್ನು ಸ್ವೀಕರಿಸಲು ಫೌಂಡೇಷನ್ ಮುಂದಾಗಿರುವುರ್ದು ಶ್ಲಾಘನೀಯ’ ಎಂದರು.
ದೇಶದಲ್ಲಿ ಪ್ರತಿವರ್ಷ 60ರಿಂದ 70 ಸಾವಿರ ಹೊಸ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತ ಪ್ರತಿ ವರ್ಷ 25ರಿಂದ 35 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ಕೆಎಂಸಿ ಆಸ್ಪತ್ರೆಯ ಡಾ.ಹರ್ಷಕುಮಾರ್ ಹೇಳಿದರು.
ತಪಸ್ಯಾ ಫೌಂಡೇಷನ್ ಟ್ರಸ್ಟಿ ಅನಿಲ್ ಯು.ಪಿ, ಮೋಹನ್, ದಿವ್ಯಾ ವಸಂತ ಶೆಟ್ಟಿ, ಎನ್ಐಟಿಕೆ ಡೀನ್ ಎ.ಸಿ ಹೆಗ್ಡೆ, ರಾಜ್ಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಗುಣರಂಜನ್, ಭಾರತ ಟ್ರಯಥ್ಲಾನ್ ಫೆಡರೇಷನ್ ಅಭಿವೃದ್ಧಿ ಅಧಿಕಾರಿ ಹರೀಶ್ ಪ್ರಸಾದ್, ಟ್ರಯಥ್ಲಾನ್ ಉಸ್ತುವಾರಿ ಎನ್.ಬಿ.ಶೆಟ್ಟಿ, ಪೋಷಕರಾದ ಸಂದೇಶ ಹೆಗ್ಡೆ, ನರಸಿಂಹ ಹೆಗ್ಡೆ, ಐಡಿಎಫ್ಸಿ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಶರಣ್ ರಜನಿ ಇದ್ದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.