
ಮೂಡುಬಿದಿರೆ: ಮಾಜಿ ಸೈನಿಕರ ವೇದಿಕೆಯ ವತಿಯಿಂದ ಇಲ್ಲಿನ ಕಡಲಕೆರೆ ಬಳಿ ನಿರ್ಮಾಣವಾಗಲಿರುವ ಯುದ್ಧ ಸ್ಮಾರಕಕ್ಕೆ ಆಂಧ್ರಪ್ರದೇಶ ರಾಜ್ಯಪಾಲ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಕರಾವಳಿ ಭಾಗದಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಿದೆ. ಇಲ್ಲಿನ ಯುವಜನರನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸಬೇಕು. ನಮ್ಮ ಜೀವನ ನಿರಾತಂಕವಾಗಿ ಸಾಗಲು ದೇಶದ ಗಡಿ ಕಾಯುವ ಸೈನಿಕರ ಶ್ರಮದಿಂದ ಸಾಧ್ಯ. ಅವರನ್ನು ನಾವು ಸದಾ ಸ್ಮರಿಸಬೇಕು. ಈ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕಕ ನಿರ್ದೇಶಕ ಕಿಶೋರ್ ಆಳ್ವ ಅವರು ಯುದ್ಧ ಸ್ಮಾರಕದ ನೀಲನಕಾಶೆ ಮತ್ತು ಸ್ಟ್ಯಾಂಪ್ಗಳನ್ನು ಬಿಡುಗಡೆಗೊಳಿಸಿದರು.
ತಹಶೀಲ್ದಾರ್ ಶ್ರೀಧರ ಮುಂದಲಮುನಿ ಮತ್ತು ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ.ಯುದ್ಧ ಸ್ಮಾರಕಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮಾಜಿ ಸೈನಿಕರ ಸಂಘಕ್ಕೆ ಹಸ್ತಾಂತರಿಸಿದರು.
ಪ್ರಮುಖರಾದ ಅಭಯಚಂದ್ರ ಜೈನ್, ಕ್ಯಾ.ಗಣೇಶ್ ಕಾರ್ಣಿಕ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿಗಳಾದ ಶ್ರೀಪತಿ ಭಟ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಜಯ್ ಫರ್ನಾಂಡಿದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಅಲಂಗಾರು ಚರ್ಚ್ ಧರ್ಮಗುರು ಫಾ.ಮೆಲ್ವಿನ್ ನೊರೊನ್ಹಾ, ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಮೌಲಾನಾ ಝಿಯಾವುಲ್ಲ್ ಹಕ್ ಆಶೀರ್ವಚನ ನೀಡಿದರು. ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.