ಕಡಬ: ಬಹುಮಾನ ಗಳಿಸುವ ಉದ್ದೇಶಕ್ಕಿಂತ ಪ್ರತಿಭೆ ಅನಾವರಣಗೊಳಿಸಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಡಬ ತಾಲ್ಲೂಕಿನ ರಾಮಕುಂಜ ಗ್ರಾಮದ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಕನ್ನಡ ಮಾದ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಮೈಸೂರು ವಿಭಾಗ ಮಟ್ಟದ 14 ಮತ್ತು 17ವರ್ಷ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ಹಲವು ಸವಾಲು ಎದುರಾಗುತ್ತವೆ. ಇವೆಲ್ಲವನ್ನೂ ಸ್ಫೂರ್ತಿಯಾಗಿಸಿಕೊಂಡು ಸಾಧನೆ ಮಾಡಿದಾಗ ಪ್ರತಿಫಲ ದೊರೆಯುತ್ತದೆ ಎಂದರು.
ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ, ಕಬಡ್ಡಿಯಂತಹ ಮಣ್ಣಿನ ಕ್ರೀಡೆ ಗ್ರಾಮೀಣ ಭಾಗದಲ್ಲಿ ಅಯೋಜನೆಗೊಂಡಾಗ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತದೆ. ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ದೊಡ್ಡ ಮಟ್ಟದ ಕ್ರೀಡೆಯನ್ನು ಆಯೋಜಿಸಿ ಮಾದರಿಯಾಗಿದೆ ಎಂದರು.
ದ.ಕ.ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ, ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರ ಲಕ್ಷ್ಮಿನಾರಾಯಣ ಮಾತನಾಡಿದರು.
ಆತೂರಿನಿಂದ ಕಾಲೇಜು ಆವರಣದವರೆಗೆ ನಡೆದ ಮೆರವಣಿಗೆಗೆ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಅವರು ಚಾಲನೆ ನೀಡಿದರು. ಶಿಕ್ಷಕಿ ಹೇಮಲತಾ ಅವರು ಪ್ರದೀಪ ಬಾಕಿಲ ದ್ವಾರ ಉದ್ಘಾಟಿಸಿದರು.
ವಿಜ್ಞಾನಿಗಳಾದ ವೀರಪ್ಪ ಪುರಿಕೆರೆ ಮಳಿಗೆಗಳನ್ನು, ನೋಣಪ್ಪ ವಿಶ್ವೇಶತೀರ್ಥ ಸಭಾಂಗಣವನ್ನು, ಬಿ.ಎಂ ಗ್ರೂಪ್ ಮುಖ್ಯಸ್ಥ ಡಾ.ವಿ.ಕನಕರಾಜ್ ಮತ್ತು ಕಬಡ್ಡಿ ಅಯೋಜನಾ ಸಮಿತಿ ಉಪಾಧ್ಯಕ್ಷ ಸೇಸಪ್ಪ ರೈ ಕ್ರೀಡಾಂಗಣ ಉದ್ಘಾಟಿಸಿದರು.
ಕಡಬ ತಾಲ್ಲೂಕು ಅಮೆಚೂರ್ ಕಬಡ್ಡಿ ನಿರ್ಣಾಯಕರ ಮಂಡಳಿ ಅಧ್ಯಕ್ಷ ದಿನೇಶ್ ಎಂ.ನೆಟ್ಟಣ, ಕಡಬ ಠಾಣಾ ಎಸ್ಐ ಅಭಿನಂದನ್ ಎಸ್., ರಾಮಕುಂಜೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಪ್ರಾಂಶುಪಾಲ ಚಂದ್ರಶೇಖರ ಕೆ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ., ಕಬಡ್ಡಿ ಆಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ, ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಉಪಾಧ್ಯಕ್ಷ ಟಿ.ನಾರಾಯಣ ಭಟ್, ಪ್ರಚಾರ ಸಮಿತಿ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಪ್ರಮುಖರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಚಂದ್ರಶೇಖರ ಸಣ್ಣಾರ ಭಾಗವಹಿಸಿದ್ದರು.
ದಿವಾಕರ ಉಪ್ಪಳ, ಮತ್ತು ವಿಜಯ್ ಅತ್ತಾಜೆ ಕ್ರೀಡಾ ಉದ್ಘೋಷಕರಾಗಿದ್ದರು.
ದೈಹಿಕ ಶಿಕ್ಷಣ ಜಿಲ್ಲಾ ಶಿಕ್ಷಣಾಧಿಕಾರಿ ಭುವನೇಶ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಬಡ್ಡಿ ಅಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಭಟ್ ಸ್ವಾಗತಿಸಿದರು. ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ವಂದಿಸಿದರು. ಉಪನ್ಯಾಸಕ ಚೇತನ್ ಕುಮಾರ್ ಆನೆಗುಂಡಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.