ADVERTISEMENT

ಮಂಗಳೂರು: ಘಟಿಕೋತ್ಸವಕ್ಕೆ ಕೈಮಗ್ಗದ ಖಾದಿ ರೇಷ್ಮೆ ಉಡುಪು

ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆ ಅಸ್ತು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:36 IST
Last Updated 3 ಫೆಬ್ರುವರಿ 2020, 12:36 IST

ಮಂಗಳೂರು: ಘಟಿಕೋತ್ಸವದಲ್ಲಿ ಕೈಮಗ್ಗದ ಖಾದಿ ರೇಷ್ಮೆಯ ಉಡುಪುಗಳನ್ನು ಬಳಸುವ ಪ್ರಸ್ತಾವಕ್ಕೆ ಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯು ಅನುಮೋದನೆ ನೀಡಿದ್ದು, ರಾಜ್ಯಪಾಲರ ಅಂಕಿತ ಬಿದ್ದರೆ ಈ ಬಾರಿಯೇ ಜಾರಿಗೆ ಬರಲಿದೆ.

ಈ ಬಗ್ಗೆ ನಿರ್ದೇಶನ ನೀಡಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವು ನೂತನ ಉಡುಪುಗಳನ್ನು ನವದೆಹಲಿಯ ಖಾದಿ ಗ್ರಾಮೋದ್ಯೋಗ್‌ ಭವನ್‌ನಿಂದ ಖರೀದಿಸುವಂತೆಯೂ ಸೂಚಿಸಿದೆ. ಈ ಹಿಂದೆ ವೆಲ್‌ವೆಟ್‌ ರೇಷ್ಮೆಯ ನಿಲುವಂಗಿಗಳನ್ನು ಬಳಸಲಾಗುತ್ತಿತ್ತು.

ಈ ಕುರಿತು ಮಾಹಿತಿ ನೀಡಿದ ಕುಲಸಚಿವ ಪ್ರೊ.ಎ.ಎಂ. ಖಾನ್, ‘ಕುಲಾಧಿಪತಿಗಳಿಗೆ ಕಡುಗೆಂಪು ನಿಲುವಂಗಿ ಹಾಗೂ ಹೆಗಲ ಮೇಲೆ ನೀಲಿ ಅಂಚಿನ ಶಾಲು (ಅಂಗವಸ್ತ್ರ), ಸಹ ಕುಲಾಧಿಪತಿಗಳಿಗೆ ನೌಕಾನೀಲಿ ನಿಲುವಂಗಿ ಹಾಗೂ ನೀಲಿ ಅಂಚಿನ ಪೀತವರ್ಣದ ಶಾಲು, ಕುಲಪತಿಗಳಿಗೆ ಆಕಾಶ ನೀಲಿ ನಿಲುವಂಗಿ ಹಾಗೂ ಕೆಂಪು ಅಂಚಿನ ಚಿನ್ನದ ಬಣ್ಣದ ಶಾಲುಗಳನ್ನು ವಿನ್ಯಾಸ ಮಾಡಲಾಗಿದೆ. ಇದೇ ರೀತಿ ಕುಲಸಚಿವರು, ಡೀನ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸೇರಿದಂತೆ ಗೌರವ ಹಾಗೂ ಡಾಕ್ಟರೇಟ್ ಸ್ವೀಕೃತರಿಗೂ ವಿವಿಧ ವಿನ್ಯಾಸಗಳನ್ನು ರೂಪಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಈ ಹಿಂದಿನ ಉಡುಪಿನಲ್ಲಿ ಸಿಕ್ಕಾಪಟ್ಟೆ ಸೆಕೆಯಾಗುತ್ತಿದ್ದು, ಖಾದಿಯು ಆರೋಗ್ಯಕರ ಧಿರಿಸಾಗಲಿದೆ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.