ADVERTISEMENT

ಕಲ್ಲಡ್ಕ: ಹೆದ್ದಾರಿ ಸಂಚಾರವೇ ದುಸ್ತರ, ಹೊಂಡಕ್ಕೆ ಬೀಳುವ ಭೀತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 5:52 IST
Last Updated 9 ಜುಲೈ 2022, 5:52 IST
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪೇಟೆ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ವಾಹನದಟ್ಟಣೆ ಮತ್ತು ಸಂಚಾರ ವ್ಯತ್ಯಯ ಉಂಟಾಗುತ್ತಿದೆ.
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪೇಟೆ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ವಾಹನದಟ್ಟಣೆ ಮತ್ತು ಸಂಚಾರ ವ್ಯತ್ಯಯ ಉಂಟಾಗುತ್ತಿದೆ.   

ಬಂಟ್ವಾಳ: ಇಲ್ಲಿನ ಕಲ್ಲಡ್ಕ ಪೇಟೆಯಲ್ಲಿ ಹಾದು ಹೋಗಿರುವ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಅಲ್ಲಲ್ಲಿ ಹೊಂಡ ತೆಗೆಯಲಾಗಿದ್ದು, ಪ್ರತಿದಿನ ರಸ್ತೆಯಲ್ಲಿ ಲಾರಿ ಮತ್ತಿತರ ವಾಹನ ಹೂತು ಹೋಗುತ್ತಿವೆ.

ಶುಕ್ರವಾರ ಬೆಳಿಗ್ಗೆ ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಪರಿಣಾಮ ಮೂರು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯುದ್ದಕ್ಕೂ ಅಗೆದು ಹಾಕಿದ್ದು, ಕೆಲವೆಡೆ ಹೊಂಡ ತೆಗೆಯಲಾಗಿದೆ. ಇದರಿಂದಾಗಿ ಕೆಸರುಮಯ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಅಪಘಾತ ಮತ್ತು ಹೊಂಡಕ್ಕೆ ಬೀಳುವುದರ ಜೊತೆಗೆ ಕೆಸರಿನಲ್ಲಿ ಪ್ರತಿದಿನ ಸಿಲುಕಿಕೊಳ್ಳುತ್ತಿವೆ.

ADVERTISEMENT

ಸಂಚಾರ ಸುಗಮಗೊಳಿಸಲು ಮೆಲ್ಕಾರ್ ಸಂಚಾರಿ ಠಾಣೆ ಎಸೈ ಮೂರ್ತಿ ಸೇರಿದಂತೆ ಹಲವು ಪೊಲೀಸರು ಪ್ರತಿದಿನ ಹರಸಾಹಸ ಪಡುವಂತಾಗಿದೆ.

ಈ ನಡುವೆ ಗುತ್ತಿಗೆ ವಹಿಸಿಕೊಂಡ ಕೆಎನ್ಆರ್ ಕಂಪನಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದರೂ ನಿರಂತರ ಮಳೆಯಿಂದ ಮಣ್ಣು ಕೊಚ್ಚಿ ಹೋಗಿದೆ. ಇಲ್ಲಿನ ಪಾಣೆಮಂಗಳೂರು ಕಲ್ಲುರ್ಟಿ ಗುಡಿಯಿಂದ ಮೆಲ್ಕಾರ್-ಕಲ್ಲಡ್ಕ ದಾಸರಕೋಡಿ ತನಕ ವಾಹನ ಸಂಚಾರಕ್ಕೆ ಪ್ರತಿದಿನ ಅಡ್ಡಿಯಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.