ಮಂಗಳೂರು: ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಜೆ. ಜಯಗಂಗಾಧರ ಶೆಟ್ಟಿ ಅವರ ಸ್ಮರಣಾರ್ಥ 13ನೇ ವರ್ಷದ ಹೊನಲು ಬೆಳಕಿನ ಜಯ- ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಫೆ.18ರಂದು ಜರುಗಲಿದೆ ಎಂದು ಜಪ್ಪಿನಮೊಗರು ಕಂಬಳ ಸಮಿತಿ ಗೌರವಾಧ್ಯಕ್ಷರಾಗಿರುವ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಜಪ್ಪಿನಮೊಗರು ನೇತೃತ್ವದಲ್ಲಿ ನಡೆಯುವ ಕಂಬಳವನ್ನು ಅಂದು ಬೆಳಿಗ್ಗೆ 8.30ಕ್ಕೆ ದೇರೆಬೈಲು ವಿಠಲದಾಸ ತಂತ್ರಿ ಉದ್ಘಾಟಿಸುವರು. ಜಿ.ಆರ್.ಮೆಡಿಕಲ್ ಕಾಲೇಜು ಹಾಗೂ ಕರಾವಳಿ ಕಾಲೇಜು ಸಮೂಹಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸುವರು. ಸಂಜೆ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಂಬಳ ಹಾಗೂ ಇತರ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಂಬಳದ ಜಾನಪದ ಸೊಗಡನ್ನು ಉಳಿಸಬೇಕು ಮತ್ತು ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಖಂಡ ಜೆ. ಕೃಷ್ಣ ಪಾಲೆಮಾರ್ ಅವರ ಮಾರ್ಗದರ್ಶನದಲ್ಲಿ ಕಂರ್ಬಿಸ್ಥಾನ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ಜೆ. ಅನಿಲ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಂಬಳ ನಡೆಯಲಿದೆ. 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ವೀಣಾಮಂಗಳ, ಪ್ರವೀಣ್ಚಂದ್ರ ಆಳ್ವ, ಸಂತೋಷ್ ಆಳ್ವ ತೋಚಿಲಗುತ್ತು, ಸಂದೀಪ್ ಶೆಟ್ಟಿ ಎಕ್ಕೂರು, ಪ್ರಧಾನ ಕಾರ್ಯದರ್ಶಿ ಉಮೇಶ್ ಅತಿಕಾರಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕರಾದ ರಾಜಾನಂದ ರೈ ಕೊಪ್ಪರಿಗೆಗುತ್ತು, ಶಕಿನ್ ಶೆಟ್ಟಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗಣೇಶ್ ಶೆಟ್ಟಿ, ರಾಜೀವ ಶೆಟ್ಟಿ ಎಡ್ತೂರು, ಸುಧಾಕರ ಶೆಟ್ಟಿ ಮುಗರೋಡಿ, ಬಾಲಕೃಷ್ಣ ಶೆಟ್ಟಿ, ಕೃಷ್ಣ ಶೆಟ್ಟಿ ತಾರೆಮಾರ್, ಸುಭಾಷ್ ಅಡಪ್ಪ, ಪ್ರಕಾಶ್ ಮೇಲಾಂಟ, ಸೀತಾರಾಮ ಶೆಟ್ಟಿ, ನಿಶಾನ್ ಪೂಜಾರಿ ಇದ್ದರು. ಕಂಬಳದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.