ADVERTISEMENT

₹1,57,500 ಕೋಟಿ ವ್ಯವಹಾರದ ಗುರಿ: ಕರ್ಣಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:21 IST
Last Updated 1 ಏಪ್ರಿಲ್ 2022, 16:21 IST
ನೂತನ ಆರ್ಥಿಕ ವರ್ಷದ ಮೊದಲ ದಿನವಾದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿದರು. 
ನೂತನ ಆರ್ಥಿಕ ವರ್ಷದ ಮೊದಲ ದಿನವಾದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿದರು.    

ಮಂಗಳೂರು: ನೂತನ ಆರ್ಥಿಕ ವರ್ಷದ ಮೊದಲ ದಿನವಾದ ಶುಕ್ರವಾರ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ದೇಶದಾದ್ಯಂತ ಇರುವ ಸಿಬ್ಬಂದಿಯ ಜೊತೆಗೆ ವೆಬೆಕ್ಸ್ ಮೂಲಕ ಮಾತನಾಡಿದರು. ಕಳೆದ ಆರ್ಥಿಕ ವರ್ಷದ ಸಾಧನೆಗಳ ಅವಲೋಕನ ಮಾಡಿದ ಅವರು, 2022-23ರ ನೀಲನಕ್ಷೆ ಕಾರ್ಯತಂತ್ರಗಳ ಕುರಿತಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಕಳೆದ ಆರ್ಥಿಕ ವರ್ಷದ ಸಾಧನೆಗಳು ಹರ್ಷದಾಯಕವಾಗಿದ್ದು, ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ ಬ್ಯಾಂಕಿನ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಠೇವಣಿ ಶೇ 32.97ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಕಂಡಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ ಬ್ಯಾಂಕಿನ ಒಟ್ಟು ವ್ಯವಹಾರವು ₹1,38,111 ಕೋಟಿಗೆ ತಲುಪಿದೆ’ ಎಂದರು.

‘ಕಳೆದ ಆರ್ಥಿಕ ವರ್ಷವು ಸಂಪೂರ್ಣವಾಗಿ ಕೋವಿಡ್‌ನಿಂದ ಬಾಧಿತವಾಗಿದ್ದರೂ ನಮ್ಮ ವ್ಯವಹಾರದಲ್ಲಿ ಉತ್ತಮ ಚೇತರಿಕೆಯನ್ನು ಕಂಡು ಈ ಸಾಧನೆ ಮಾಡುವಂತಾಗಿದೆ. ಕೇಂದ್ರ ಸರ್ಕಾರದ ಉತ್ತಮ ನೀತಿಗಳು, ಉತ್ಪಾದನಾ ಕ್ಷೇತ್ರಗಳಿಗೆ ನೀಡುತ್ತಿರುವ ಬೆಂಬಲ ಹಾಗೂ ಹಸಿರು ಆರ್ಥಿಕ ನೀತಿಗಳಿಂದಾಗಿ, ಜಾಗತಿಕ ಯುದ್ಧಗಳ ಕಾರ್ಮೋಡಗಳ ಛಾಯೆಯ ಅಡಿಯಲ್ಲಿಯೂ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವ ಭರವಸೆ ಇದೆ’ ಎಂದು ಹೇಳಿದರು.

ADVERTISEMENT

‘ನಮ್ಮ ಬ್ಯಾಂಕ್‌ ಹೊಸ ಆರ್ಥಿಕ ವರ್ಷದಲ್ಲಿ ಶೇ 14 ವೃದ್ಧಿ ದರದೊಂದಿಗೆ ₹1,57,500 ಕೋಟಿಗಳ ಒಟ್ಟು ವ್ಯವಹಾರವನ್ನು ಗುರಿ ಹೊಂದಿದೆ. ಅಂತೆಯೇ ‘ಕೆಬಿಎಲ್ - ವಿಕಾಸ್’ ಪರಿವರ್ತನಾ ಜೈತ್ರ ಯಾತ್ರೆಯ ಪ್ರಥಮ ಹಂತದಲ್ಲಿ ನಾವು ಅನೇಕ ಡಿಜಿಟಲ್ ಉಪಕ್ರಮಗಳನ್ನು ಅಳವಡಿಸಿ, ಡಿಜಿಟಲ್ ಅಂಡರ್ ರೈಟಿಂಗ್, ರಿಟೇಲ್ ಲೋನ್ ಪ್ರೊಡಕ್ಟ್ ಮುಂತಾದವುಗಳನ್ನು ಪರಿಚಯಿಸಿ ಬ್ಯಾಂಕಿಂಗ್ ಉದ್ಯಮದಲ್ಲಿ ಹೊಸ ಔನ್ನತ್ಯವನ್ನು ಸಾಧಿಸಿದ್ದೇವೆ’ ಎಂದು ತಿಳಿಸಿದರು.

ಅದರ ಮುಂದಿನ ಹಂತವಾದ ‘ಕೆಬಿಎಲ್ ನೆಕ್ಸ್ಟ್‌’ ಎಂಬ ಪರಿಕಲ್ಪನೆ ಈಗ ರೂಪುಗೊಂಡಿದ್ದು, ಅದರ ಅಡಿಯಲ್ಲಿ ಅನೆಲಿಟಿಕ್ಸ್, ಚಾಟ್‌ಬಾಟ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಮೆಷಿನ್ ಲರ್ನಿಂಗ್ ಆಧರಿತ ಆಧುನಿಕ ಉತ್ಪನ್ನಗಳನ್ನು ಪರಿಚಯಿಸಲಿದ್ದೇವೆ. ಶತಮಾನದ ಸಂಭ್ರಮದತ್ತ ದಾಪುಗಾಲು ಹಾಕುತ್ತಿರುವ ಬ್ಯಾಂಕ್‌, ತನ್ನ ಡಿಜಿಟಲ್ ಉಪಕ್ರಮಗಳಿಂದಾಗಿ ಅರ್ಥಪೂರ್ಣವಾದ ಅಸ್ತಿತ್ವವನ್ನು ಹೊಂದಿ, ಸರ್ವ ಆಯಾಮಗಳಲ್ಲೂ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿ ಉತ್ಕೃಷ್ಟತೆಯನ್ನು ಮೆರೆಯಲಿದೆ’ ಎಂದು ಹೇಳಿದರು.

ಬ್ಯಾಂಕಿನ ನಿರ್ವಹಣಾ ಅಧಿಕಾರಿ ಬಾಲಚಂದ್ರ ವೈ.ವಿ., ಮುಖ್ಯ ವಹಿವಾಟು ಅಧಿಕಾರಿ ಗೋಕುಲ್‌ದಾಸ್ ಪೈ, ಮಹಾಪ್ರಬಂಧಕರು, ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.