ADVERTISEMENT

ಉಜಿರೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ, ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 13:34 IST
Last Updated 27 ಜೂನ್ 2023, 13:34 IST
ಉಜಿರೆಯಲ್ಲಿ ಕೆಂಪೇಗೌಡ ಜಯಂತಿ ಮತ್ತು ರಕ್ತದಾನ ಶಿಬಿರವನ್ನು ರಂಜನ್ ಜಿ.ಗೌಡ ಉದ್ಘಾಟಿಸಿದರು
ಉಜಿರೆಯಲ್ಲಿ ಕೆಂಪೇಗೌಡ ಜಯಂತಿ ಮತ್ತು ರಕ್ತದಾನ ಶಿಬಿರವನ್ನು ರಂಜನ್ ಜಿ.ಗೌಡ ಉದ್ಘಾಟಿಸಿದರು   

ಉಜಿರೆ: ಇನ್ನೊಬ್ಬರ ಪ್ರಾಣ ಉಳಿಸುವ ರಕ್ತದಾನವು ಎಲ್ಲಾ ದಾನಗಳಲ್ಲೂ ಶ್ರೇಷ್ಠವಾಗಿದೆ. ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಶ್ರೀಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಹೇಳಿದರು.

ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜೀವನಶೈಲಿ ಮತ್ತು ಆಹಾರಪದ್ಧತಿಯಿಂದಾಗಿ ರೋಗಗಳು ಹೆಚ್ಚಾಗುತ್ತಿವೆ. ಸಮಾಜದಲ್ಲಿ ರಕ್ತದಾನದ ಮಹತ್ವದ ಅರಿವು, ಜಾಗೃತಿ ಮೂಡಿಸಲು ನಾಡಿನ ಶ್ರೇಷ್ಠ ಪ್ರಜೆ ನಾಡಪ್ರಭು ಕೆಂಪೇಗೌಡ ಜಯಂತಿ ಸಂದರ್ಭ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.

ADVERTISEMENT

ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಇಚ್ಚಿಲ ಸುಂದರಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಮಾತನಾಡಿದರು. ಉದ್ಯಮಿ ಶಿವಕಾಂತ ಗೌಡ ಅಧ್ಯಕ್ಷತೆ ವಹಿಸಿದ್ದರು.

ಸುಧಾಕರ ಗೌಡ ಸ್ವಾಗತಿಸಿದರು. ಗೀತಾ ಗೌಡ ಧನ್ಯವಾದವಿತ್ತರು. ಅನಿಲ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 100 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಗೌಡ ಸಮುದಾಯದ ಯುವಕ ಮನೋಜ್ ಧರ್ಮಸ್ಥಳ ಅವರ ಚಿಕಿತ್ಸೆಗೆ ದಾನಿಗಳಿಂದ ಸಂಗ್ರಹಿಸಿದ ₹ 1.60 ಲಕ್ಷದ ಚೆಕ್ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.