ADVERTISEMENT

ಕುಡುಪು ಗುಂಪು ಹಲ್ಲೆ ಪ್ರಕರಣ: ಹೇಳಿಕೆ ಹಿಂಪಡೆಯುವಂತೆ ಗೃಹ ಸಚಿವರಿಗೆ SDPI ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 9:14 IST
Last Updated 30 ಏಪ್ರಿಲ್ 2025, 9:14 IST
<div class="paragraphs"><p>ಮಂಗಳೂರಿನಲ್ಲಿ ಎಸ್‌ಡಿಪಿಐ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು</p></div>

ಮಂಗಳೂರಿನಲ್ಲಿ ಎಸ್‌ಡಿಪಿಐ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಮಂಗಳೂರು: ‘ಕುಡುಪುವಿನಲ್ಲಿ ಗುಂಪು ಹಲ್ಲೆಯಿಂದ ಯುವಕ ಅಶ್ರಫ್ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಜೊತೆಗೆ ಜವಾಬ್ದಾರಿಯುತವಾಗಿರುವ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್‌ ಒತ್ತಾಯಿಸಿದರು.

ADVERTISEMENT

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನೆರೆಯ ಶತ್ರು ದೇಶದ ಪರ ಜೈಕಾರ ಕೂಗಿದ ಕಾರಣಕ್ಕೆ ಆ ಯುವಕನ ಮೇಲೆ ಹಲ್ಲೆ ನಡೆದಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೇ ಅಥವಾ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಸಮಾಜವಾದಿ ಸಿದ್ಧಾಂತದ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಕೂಡ ಗುಂಪು ಹತ್ಯೆಯ ಬಗ್ಗೆ ಈವರೆಗೂ ಮಾತನಾಡಿಲ್ಲ.‌ ಇಲ್ಲಿ ಉತ್ಸವಗಳಿದ್ದರೆ, ಬೇರೆ ಕಾರ್ಯಕ್ರಮಗಳಿದ್ದರೆ ವಿಮಾನ ಹತ್ತಿ ಬರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗ ಸಮಯ ಸಿಕ್ಕಿಲ್ಲವೇ" ಎಂದು ಪ್ರಶ್ನಿಸಿದರು.

'ಯುವಕನ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿ‌ ಭಾಗಿಯಾಗಿರುವ ಆರೋಪ ಇದ್ದು, ಆ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಸ್ಥಳೀಯ ಶಾಸಕರು ಆ ವ್ಯಕ್ತಿಯ ರಕ್ಷಣೆಗೆ ನಿಂತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಪ್ರಕರಣದ ಸಮಗ್ರ ತನಿಖೆ‌ ನಡೆಸಬೇಕು. ರಾಜ್ಯ ಸರ್ಕಾರ ಯುವಕನ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.‌

ಪಕ್ಷದ ಪ್ರಮುಖರಾದ ರಿಯಾಜ್ ಕಡಂಬು, ನಿಸಾರ್ ಅಹಮ್ಮದ್, ಸಿದ್ದೀಕ್ ಬೆಂಗ್ರೆ, ಅಕ್ಬರ್ ಕುದ್ರೋಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.