ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಅನನ್ಯಾ ಎಂ.ಡಿ ಮತ್ತು ವೆನಿಸ್ಸಾ ಶರಿನಾ ಡಿಸೋಜ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.
‘ಸತತ ಪ್ರಯತ್ನ ಅಂಕ ಗಳಿಕೆಗೆ ಪೂರಕವಾಯಿತು. ಕೋವಿಡ್ ಕಾರಣದಿಂದ ತರಗತಿಗಳು ಸ್ಥಗಿತವಾದಾಗ ಪ್ರಯತ್ನ ಬಿಡದೆ ಅಧ್ಯಯನ ನಡೆಸುತ್ತಿದ್ದೆ. ವಿದ್ಯಾಲಯದಲ್ಲಿ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಆನ್ಲೈನ್ ತರಗತಿ ಮೂಲಕ ಹೆಚ್ಚಿನ ಜ್ಞಾನ ನೀಡುತ್ತಿದ್ದರು. ಪೋಷಕರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದರು. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಸ್ವ ಪ್ರಯತ್ನ ಮತ್ತು ಶಿಕ್ಷಕರ ಸಹಕಾರದಿಂದ ಅಧಿಕ ಅಂಕ ಪಡೆಯಲು ಸಾಧ್ಯವಾಯಿತು. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಿ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಇದೆ’ ಎಂದು ಅನನ್ಯಾ ಹೇಳಿದರು.
ವೈದ್ಯೆಯಾಗುವೆ: ‘625 ಅಂಕ ಬರಬಹುದೆಂಬ ನಿರೀಕ್ಷೆ ಇತ್ತು. ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಪೂರ್ಣ ಅಂಕ ಪಡೆಯಬೇಕೆಂದು ಒಂದು ವರ್ಷದಿಂದ ನಿರಂತರವಾಗಿ ಶ್ರಮಪಡುತ್ತಿದ್ದೆ. ಇದು ನನ್ನ ಪಾಲಿಗೆ ಕೇವಲ ಓದಾಗಿರಲಿಲ್ಲ, ಬದಲಾಗಿ ಪ್ರಾರ್ಥನೆಯಾಗಿತ್ತು. ಅಪ್ಪ–ಅಮ್ಮನ ಪ್ರೋತ್ಸಾಹ, ವಿದ್ಯಾ ಸಂಸ್ಥೆಯ ಶಿಕ್ಷಕರ ಮಾರ್ಗದರ್ಶನ ಸಹಕಾರಿಯಾಯಿತು. ಎಂಬಿಬಿಎಸ್ ಓದಿ ವೈದ್ಯೆಯಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವ ಆಸೆ ಇದೆ’ ಎಂದು ವೆನಿಸ್ಸಾ ಶರಿನಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.