ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಣ್ಣಾನೆ ಯಶಸ್ವಿ ಆರೋಗ್ಯವಾಗಿದ್ದು, ಅದರ ನಿರ್ವಹಣೆಯೂ ಉತ್ತಮವಾಗಿದೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ವಿನಯ್ ಎಸ್.ವರದಿ ನೀಡಿದ್ದಾರೆ.
ಗುರುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆನೆಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮಾಹಿತಿ ನೀಡಿ ದೇವಳಕ್ಕೆ ವರದಿ ಸಲ್ಲಿಸಿದ್ದಾರೆ.
ದೇವಳದ ಆನೆಯ ನಿರ್ವಹಣೆಯನ್ನು ನಿಗದಿಯಂತೆ ನೋಡಿಕೊಳ್ಳಲಾಗುತ್ತಿದೆ. ಆನೆಯ ದೇಹದಲ್ಲಿ ಯಾವುದೇ ಗಾಯ, ಅನಾರೋಗ್ಯ ಇಲ್ಲ. ಆನೆಯ ನಾಲ್ಕು ಕಾಲುಗಳೂ ಆರೋಗ್ಯವಾಗಿದ್ದು, ನಡೆದಾಡಲು ಸಾಧ್ಯವಿರುವಂತಿದೆ. ನಿಯಮಿತ ಆಹಾರ ನೀಡಲಾಗುತ್ತಿದೆ. ಆನೆಗೆ 20 ವರ್ಷ ವಯಸ್ಸಾಗಿದ್ದು, ಆರೋಗ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಸಂರಕ್ಷಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ ವಯಲ ಅರಣ್ಯಾಧಿಕಾರಿ ವಿಮಲ್ ಬಾಬು, ಉಪ ವಲಯ ಅರಣ್ಯಾಧಿಕಾರಿ ಮನೋಜ್ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.