ADVERTISEMENT

ಮನೆ–ಮನ ಬೆಳಗುವ ಧರ್ಮಸ್ಥಳ ಲಕ್ಷದೀಪೋತ್ಸವ

ಆರ್.ಎನ್.ಪೂವಣಿ
Published 29 ನವೆಂಬರ್ 2024, 6:26 IST
Last Updated 29 ನವೆಂಬರ್ 2024, 6:26 IST
ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು
ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು   

ಉಜಿರೆ: ಎಂಟು ಶತಮಾನಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ಉತ್ಸವಗಳ ಸಂಭ್ರಮ. ಲಕ್ಷದೀಪೋತ್ಸವವು ಭಕ್ತಿ– ಭಾವೈಕ್ಯದ ಕ್ಷಣ. ನಾಡಿನೆಲ್ಲೆಡೆಯಿಂದ ಬರುವ ಭಕ್ತರಿಗೆ ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಮನರಂಜನೆಯ ಸೊಗಡನ್ನು ಆಸ್ವಾದಿಸಿ, ಆನಂದಿಸುವ ಸಂತಸದ ಸಮಯ.

ಸರ್ವಧರ್ಮ ಸಮನ್ವಯ ಕೇಂದ್ರವಾಗಿರುವ ಧರ್ಮಸ್ಥಳದ ಆರಾಧ್ಯ ದೇವರು ಮಂಜುನಾಥ ಸ್ವಾಮಿ. ಅರ್ಚಕರು ವೈಷ್ಣವ ಸಂಪ್ರದಾಯದವರು. ದೇವಸ್ಥಾನದ ಆಡಳಿತ ನಡೆಸುವ ಧರ್ಮಾಧಿಕಾರಿ ಜೈನ ಧರ್ಮದವರು. ಹಿಂದೂಗಳು, ಜೈನರು, ಕ್ರೈಸ್ತರು, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಶ್ರದ್ಧಾ- ಭಕ್ತಿಯಿಂದ ಧರ್ಮಸ್ಥಳಕ್ಕೆ ಬರುತ್ತಾರೆ.

ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ: ಜಾತ್ರೆ, ಉತ್ಸವಗಳು ಜನರ ಜೀವನಶೈಲಿ ಮೇಲೆ ಪರಿಣಾಮ ಬೀರಬೇಕು. ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಉತ್ತಮ ಧಾರ್ಮಿಕ ಹಾಗೂ ಸಂಸ್ಕಾರ ಮೂಡಿ ಬರಬೇಕು ಎಂಬ ಉದ್ದೇಶದಿಂದ 1933ರಲ್ಲಿ ಅಂದಿನ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ಮಂಜಯ್ಯ ಹೆಗ್ಗಡೆ ಅವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಪ್ರಾರಂಭಿಸಿದರು.

ADVERTISEMENT

ವಿವಿಧ ಧರ್ಮಗಳ ವಿದ್ವಾಂಸರನ್ನು, ನೇತಾರರನ್ನು ಆಹ್ವಾನಿಸಿ ಧರ್ಮಗಳ ತತ್ವ, ಸಿದ್ಧಾಂತಗಳ ಬಗ್ಗೆ ಪರಸ್ಪರ ಅನುಭವ, ಅಭಿಪ್ರಾಯ ಹಂಚಿಕೊಂಡು ಚಿಂತನ- ಮಂಥನ ನಡೆಸುವುದು, ಸರ್ವಧರ್ಮಗಳ ಬಗ್ಗೆಯೂ ಗೌರವ, ಅಭಿಮಾನ ಹೊಂದುವುದು ಹಾಗೂ ಸಹಬಾಳ್ವೆಯ ತತ್ವಬೋಧನೆ ಸರ್ವಧರ್ಮ ಸಮ್ಮೇಳನದ ಉದ್ದೇಶ.

ಜನರಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅರಿವು, ಜಾಗೃತಿ ಮೂಡಿಸುವುದು ಸಾಹಿತ್ಯ ಸಮ್ಮೇಳನದ ಗುರಿ. ನಾಡಿನ ಸಾಹಿತಿಗಳು, ಕಲಾವಿದರು ಹಾಗೂ ವಿದ್ವಾಂಸರನ್ನು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತದೆ. 1952ರಲ್ಲಿ ಉಭಯ ಸಮ್ಮೇಳನಗಳ ರಜತಮಹೋತ್ಸವವನ್ನು ರತ್ನವರ್ಮ ಹೆಗ್ಗಡೆ ಅವರ ನೇತೃತ್ವದಲ್ಲಿ ಆಚರಿಸಲಾಗಿತ್ತು.

ಪ್ರಸ್ತುತ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ 1982ರಲ್ಲಿ ಸುವರ್ಣಮಹೋತ್ಸವ ಹಾಗೂ 2007ರಲ್ಲಿ ಉಭಯ ಸಮ್ಮೇಳನಗಳ ಅಮೃತಮಹೋತ್ಸವ ಆಚರಿಸಲಾಯಿತು.

ಸಾಹಿತ್ಯ ಸಮ್ಮೇಳನ ನಾಳೆ:

ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನ.30ರಂದು ಸಂಜೆ 5 ಗಂಟೆಗೆ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸುವರು. ಲೇಖಕ ಉಡುಪಿಯ ಪಾದೆಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಪ್ರಮೀಳಾ ಮಾಧವ, ಮೈಸೂರಿನ ಬಿ.ವಿ. ವಸಂತಕುಮಾರ್, ಪ್ರೊ. ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡುವರು.

ರಾತ್ರಿ 12ಗಂಟೆ ಬಳಿಕ ಲಕ್ಷದೀಪೋತ್ಸವ (ಗೌರಿಮಾರುಕಟ್ಟೆ ಉತ್ಸವ) ನಡೆಯಲಿದ್ದು, ನಾಡಿನೆಲ್ಲೆಡೆಯಿಂದ ಭಕ್ತರು ಬರಲಿದ್ದಾರೆ.

ಕಲಾಸೇವೆ: ಕೊಂಬು, ಕಹಳೆ, ಜಾಗಟೆ, ಶಂಖ, ಸಣ್ಣಾಟ ಮೊದಲಾದ ಜಾನಪದ ಕಲಾವಿದರು ಇಡೀ ರಾತ್ರಿ ಕಲಾಸೇವೆ ಅರ್ಪಿಸುವರು.

ನಗ, ನಗದು ಕಳವು

ಉಜಿರೆ: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ನ.24ರಂದು ಬಂದ ಮಹಿಳೆಯ ಬ್ಯಾಗ್‌ನಿಂದ ನಗದು ಸಹಿತ ₹12.90 ಲಕ್ಷ  ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.

ಉಡುಪಿ ಜಿಲ್ಲೆಯ ಕಾಪು ಗ್ರಾಮದ ನಿವಾಸಿ ಗಾಯತ್ರಿ ಆರ್. ಜೋಗಿ ಅವರ ಬ್ಯಾಗ್‌ನಲ್ಲಿದ್ದ ₹10 ಸಾವಿರ ನಗದು ಹಾಗೂ ಚಿನ್ನಾಭರಣ ಕಳವಾಗಿದೆ.

ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು
ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.