ADVERTISEMENT

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಏಳು ಎಕರೆ ಅತಿಕ್ರಮಣ

ಜಮೀನಿನ ಸುತ್ತಲೂ ಆವರಣ ಗೋಡೆ ನಿರ್ಮಾಣ: ಪ್ರೊ.ಯಡಪಡಿತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:40 IST
Last Updated 12 ಫೆಬ್ರುವರಿ 2020, 9:40 IST
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ ಮಾತನಾಡಿದರು. -     – ಪ್ರಜಾವಾಣಿ ಚಿತ್ರ
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ ಮಾತನಾಡಿದರು. -     – ಪ್ರಜಾವಾಣಿ ಚಿತ್ರ   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 7 ಎಕರೆ ಅತಿಕ್ರಮಣಕ್ಕೆ ಒಳಗಾಗಿದೆ. ವಿಶ್ವವಿದ್ಯಾಲಯದ ಜಮೀನಿನ ಸುತ್ತಲೂ ಭದ್ರವಾದ ಆವರಣಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಒತ್ತುವರಿಯಾದ ಜಾಗದಲ್ಲಿ ಬೇಲಿ ನಿರ್ಮಿಸಲಾಗುವುದು. ವಿಶ್ವವಿದ್ಯಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರ ಜತೆಗೆ ರಾಜ್ಯಪಾಲರ ಅನುಮತಿ ಸಿಕ್ಕಿದರೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಸಿಬ್ಬಂದಿ ನಿಯೋಜಿಸುವ ಕುರಿತೂ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ADVERTISEMENT

ದುಂದುವೆಚ್ಚಕ್ಕೆ ಕಡಿವಾಣ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವು
ದರೊಂದಿಗೆ, ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಸಾಕಷ್ಟು ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು. ವಿವಿಧ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ಮೊತ್ತವನ್ನು ತಂದು ವಿಶ್ವವಿದ್ಯಾಲಯ ಸೇರಿದಂತೆ ಕೊಣಾಜೆ ಗ್ರಾಮದ ಅಭಿವೃದ್ಧಿಗೂ ವಿವಿಧ ಯೋಜನೆಗಳನ್ನು ರೂಪಿಸ ಲಾಗುವುದು ಎಂದು ಪ್ರೊ ಯಡಪಡಿತ್ತಾಯ ಹೇಳಿದರು.

‘ಪ್ರತಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಪರಿಣಾಮದ ಕುರಿತು ಮುಂದಾಲೋಚನೆ ವಹಿಸಿ ಜಾರಿಗೆ ತರಲಾಗುತ್ತಿದೆ. ದೇಶದಲ್ಲೇ ವಿಭಿನ್ನ ವಿಶ್ವವಿದ್ಯಾಲಯವನ್ನಾಗಿ ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬಂದಿದ್ದು, ಮೊದಲ ದಿನದಿಂದಲೇ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ’ ಎಂದರು.

ವಿದ್ಯಾರ್ಥಿ ಪ್ರಥಮ ವರ್ಷ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶ ಪಡೆದಾಗ, ಆತ ಕ್ಯಾಂಪನ್ ಒಳಗಡೆ ಒಂದು ಗಿಡ ನೆಡಬೇಕು. ಎರಡು ವರ್ಷಗಳ ಕಾಲ ಆತನೇ ಆ ಗಿಡದ ಪೋಷಕ. ಆ ಸಸಿಗೆ ಬಾರ್ ಕೋಡ್ ವ್ಯವಸ್ಥೆ ಅಳವಡಿಸಿ, ಗಿಡ ನೆಟ್ಟ ವಿದ್ಯಾರ್ಥಿಯ ಹೆಸರು, ಕೋರ್ಸ್, ದಿನಾಂಕ ಸೇರಿದಂತೆ ವಿವರಗಳು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. 10 ವರ್ಷದ ಬಳಿಕ ವಿದ್ಯಾರ್ಥಿ ಕ್ಯಾಂಪಸ್‌ ಬಂದಾಗ ತಾನು ನೆಟ್ಟ ಗಿಡ ಮರವಾಗಿರುವುದನ್ನು ನೋಡಿ ಆನಂದಿಸಬಹುದು ಎಂದು ತಿಳಿಸಿದರು.

ಫಿಟ್ ಕ್ಯಾಂಪಸ್ ಭಾಗವಾಗಿ ಹಾಸ್ಟೆಲ್ ಹಾಗೂ ಕಾಲೇಜಿನಲ್ಲಿ ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಬ್ಲಿಕ್ ಜಿಮ್ ಪಾರ್ಕ್‌ ಅನ್ನು ಕ್ಯಾಂಪಸ್‌ನಲ್ಲಿ ಆರಂಭಿಸಲಾಗುವುದು. ಕ್ಯಾಂಪಸ್‌ನಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಬ್ಯಾಟರಿ ಚಾಲಿತ ಬಗ್ಗೀಸ್, ಸೈಕಲ್‌ಗಳಿಗೆ ಮಾತ್ರ ಅವಕಾಶ ನೀಡಲು ಉದ್ದೇಶಿಸಲಾಗಿದೆ. ನಾಲ್ಕು ವರ್ಷದೊಳಗೆ ಸಾರ್ವಜನಿಕ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಸಹಕಾರದಿಂದ ಕ್ಯಾಂಪಸ್‌ನಿಂದ ಹೊರಗೆ ನಿರ್ಮಿಸಲಾಗುವುದು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಭಾಸ್ಕರ ರೈ ಕಟ್ಟ ನಿರೂಪಿಸಿದರು.

ನಿರ್ವಹಣಾ ಬಜೆಟ್‌
ವಿಶ್ವವಿದ್ಯಾಲಯದ ಹೊಣೆಗಾರಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ನಿರ್ವಹಣಾ ಬಜೆಟ್ ಅನ್ನು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಪ್ರೊ.ಪಿ.ಎಸ್‌. ಯಡಪಡಿತ್ತಾಯ ತಿಳಿಸಿದರು.

ರಚನಾತ್ಮಕ ಲೆಕ್ಕಪರಿಶೋಧನೆ, ಇಂಧನ ಲೆಕ್ಕಪರಿಶೋಧನೆ, ಅಗ್ನಿಶಾಮಕ ಲೆಕ್ಕಪರಿಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಲೆಕ್ಕಪರಿಶೋಧನೆಯನ್ನು ನಡೆಸಲು ಯೋಜನೆಗಳಿವೆ ಎಂದ ಅವರು, ವಿಶ್ವವಿದ್ಯಾಲಯದ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಎಂದರು.

ಒಂದೇ ವಿಭಾಗದಲ್ಲಿ 3 ವರ್ಷಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿರುವ ಆಡಳಿತದಲ್ಲಿ ಬೋಧಕೇತರ ಸಿಬ್ಬಂದಿಯನ್ನು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಬೇರೆ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.

*
ಮಂಗಳೂರು ವಿಶ್ವವಿದ್ಯಾಲಯವನ್ನು ಪರಿಸರ ಸ್ನೇಹಿಯಾಗಿ ರೂಪಿಸುವುದರ ಜತೆಗೆ ಜತೆಗೆ ಕ್ಲೀನ್, ಗ್ರೀನ್, ಫಿಟ್ ಕ್ಯಾಂಪಸ್ ಮಾಡುವ ಉದ್ದೇಶವಿದೆ.
-ಪ್ರೊ.ಪಿ.ಎಸ್‌. ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.