ADVERTISEMENT

ಬೈಕಂಪಾಡಿಯಲ್ಲಿ ಗುಡ್ಡ ಕುಸಿತ: ₹ 15 ಲಕ್ಷ ನಷ್ಟ

ಜಿಲ್ಲೆಯಲ್ಲಿ 3 ಮನೆ ಸಂಪೂರ್ಣ, 9 ಮನೆಗಳಿಗೆ ಭಾಗಶಃ ಹಾನಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 16:01 IST
Last Updated 18 ಜುಲೈ 2021, 16:01 IST
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುಡ್ಡ ಕುಸಿತ ಆಗಿರುವುದು
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುಡ್ಡ ಕುಸಿತ ಆಗಿರುವುದು   

ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಗೆಬೈಕಂಪಾಡಿಯ ಕೈಗಾರಿಕಾ ಕ್ಷೇತ್ರದಲ್ಲಿರುವ ಆದಿಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿಗೆ ಹೊಂದಿಕೊಂಡಿರುವ ಮಣ್ಣಿನ ಗುಡ್ಡ ಸಹಿತ ಕಾಂಕ್ರಿಟ್‌ ತುಂಡುಗಳು ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

‘ಗುಡ್ಡ ಕುಸಿತದಿಂದ ನಮ್ಮ ಕೈಗಾರಿಕಾ ಸ್ಥಳದಲ್ಲಿದ್ದ 2,000 ಬ್ಯಾಗ್ ಸಿಮೆಂಟ್, 50 ಲೋಡ್‌ನಷ್ಟು ಮರಳು ಮಣ್ಣಿನಡಿ ಸಿಲುಕಿದೆ. ಇಂಟಕ್‌ ಲಾಕ್‌ಗಳಿಗೆ ಹಾನಿಯಾಗಿದೆ. ₹ 15 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಇದೇ ಜಾಗದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಅಪಾಯ ಇದೆ. ಗುಡ್ಡ ಕುಸಿದ ಜಾಗದಲ್ಲಿ ಮತ್ತೊಂದು ಬೃಹತ್ ಗಾತ್ರದ ಬಂಡೆ ಬೀಳುವ ಹಂತದಲ್ಲಿದೆ. ಗುಡ್ಡದ ಮೇಲ್ಭಾಗದಲ್ಲಿರುವ ಕಟ್ಟಡವೂ ಅಪಾಯದಲ್ಲಿದೆ’ ಎಂದು ಆದಿಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿ ಮಾಲೀಕ ಗೋಪಾಲ್ ಬಿ.ವಿ ಪ್ರತಿಕ್ರಿಯಿಸಿದರು.ಇಂಟರ್‌ಲಾಕ್ ಇಂಡಸ್ಟ್ರಿಯ ಸುತ್ತಲೂ ಗುಡ್ಡ ಕುಸಿದ ಮಣ್ಣ ಹರಡಿಕೊಂಡಿದೆ.

ಜಿಲ್ಲೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಶನಿವಾರ ರಾತ್ರಿ ಆರಂಭವಾದ ಮಳೆ ಭಾನುವಾರ ಮಧ್ಯಾಹ್ನದವರೆಗೂ ನಿರಂತರವಾಗಿ ಸುರಿಯಿತು.ಅನೇಕ ಕಡೆಗಳಲ್ಲಿ ಗುಡ್ಡ ಕುಸಿದಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೂರು ಮನೆಗಳಿಗೆ ಸಂಪೂರ್ಣ ಹಾನಿ ಆಗಿದ್ದರೆ, ಒಂಬತ್ತು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ADVERTISEMENT

ಮಂಗಳೂರು ತಾಲ್ಲೂಕಿನ ಕೊಂಪದವು ಗ್ರಾಮದ ಜಾನಕಿ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕುಂಜತ್ತಬೈಲ್ ಗ್ರಾಮದ ಬಸವನ ನಗರದ ಜಯಲಕ್ಷ್ಮಿ ಅವರ ಮನೆಗೆ, ಬಪ್ಪನಾಡು ಗ್ರಾಮದ ಬಾಳೆಹಿತ್ಲುವಿನ ಶಾಂತಾ ಅವರ ಮನೆಗೆ ಹಾನಿಯಾಗಿದೆ.

ಕಡಬದಲ್ಲಿ 85 ಮಿ.ಮೀ, ಬೆಳ್ತಂಗಡಿ 83 ಮಿ.ಮೀ, ಬಂಟ್ವಾಳ 75 ಮಿ.ಮೀ, ಪುತ್ತೂರು 70 ಮಿ.ಮೀ, ಮಂಗಳೂರು 66 ಮಿ.ಮೀ, ಸುಳ್ಯ 64 ಮಿ.ಮೀ ಮಳೆ ದಾಖಲಾಗಿದೆ.ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿ 27.6 ಮೀಟರ್ (ಅಪಾಯದ
ಮಟ್ಟ 31.5 ಮೀಟರ್) ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 5.9 ಮೀಟರ್(ಅಪಾಯದ ಮಟ್ಟ 8.5 ಮೀಟರ್) ಎತ್ತರದಲ್ಲಿ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.